ಲೋಕಲ್ ನ್ಯೂಸ್ ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 05, 2026
“ತಾಲ್ಲೂಕಿನ ಆರ್.ಎಚ್.ಕ್ಯಾಂಪ್ ನಂ.1ರಲ್ಲಿ ಯಾವುದೇ ಪರವಾನಗಿ ಇಲ್ಲದೇ, ಕಾನೂನುಬಾಹಿರವಾಗಿ ಹಾಡಹಗಲೇ ಮರಳು ಅಕ್ರಮ ಸಾಗಣೆ ಮಾಡಲಾಗುತ್ತಿರುವುದನ್ನು ತಡೆಯಲು ಮುಂದಾದ ಅಧಿಕಾರಿಗಳು ಹಾಗೂ ನಮ್ಮ ಸಂಘಟನೆಯವರ ಮೇಲೆ ಮರಳು ಅಕ್ರಮ ಸಾಗಣೆದಾರರು ಗುಂಪು ಕಟ್ಟಿಕೊಂಡು ಬಂದು ಹಲ್ಲೆಗೆ ಯತ್ನಿಸಿದ್ದಾರೆ” ಎಂದು ಕರ್ನಾಟಕ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಪಾಟೀಲ್ ಭೇರಿಗಿ ಹಾಗೂ ರಾಜ್ಯ ಕಾರ್ಯದರ್ಶಿ ಚಿಟ್ಟಿಬಾಬು ಆರೋಪಿಸಿದ್ದಾರೆ.
‘ಅಧಿಕಾರಿಗಳ ಸ್ಥಳ ಪರಿಶೀಲನೆ ವೇಳೆ ಗಲಾಟೆ’
ಈ ಕುರಿತು ಶುಕ್ರವಾರ ಪತ್ರಿಕಾ ಪ್ರಕಟಣೆಯೊಂದಿಗೆ ಕೆಲ ವಿಡಿಯೋ ತುಣುಕಗಳನ್ನು ಬಿಡುಗಡೆ ಮಾಡಿರುವ ಅವರು “ಆರ್.ಎಚ್. ನಂ: 1 ಗ್ರಾಮದ ಸರಕಾರ ನೀಡಿದ ಜಮೀನು ಸರ್ವೆ ನಂ: 321 /322 /239 ಹಾಗೂ ಸರ್ವೆ ನಂ: 311/* /179 ಜಮೀನುಗಳಲ್ಲಿ, ಜಮೀನಿನ ಮಾಲೀಕರು ಮತ್ತು ಅಕ್ರಮ ಮಣ್ಣಿನ ಲೂಟಿಕೋರರು ಶಾಮೀಲಾಗಿ ಕಾನೂನು ಬಾಹಿರವಾಗಿ ಮಣ್ಣನ್ನು ಲೂಟಿ ಮಾಡುತ್ತಿರುವ ಕುರಿತಂತೆ ನಮ್ಮ ಸಂಘಟನೆಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ದಿನಾಂಕ: 6-4-2026 ರಂದು ಹಾಗೂ ಹಿರಿಯ ಭೂ ವಿಜ್ಞಾನಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರಾಯಚೂರು ಇವರಿಗೆ ದೂರು ಸಲ್ಲಿಸಲಾಗಿತ್ತು. ಈ ದೂರಿನ ಅನ್ವಯ ದಿನಾಂಕ: 4-6-2026 ರಂದು ಮಧ್ಯಾಹ್ನ 1-30 ಗಂಟೆ ಸುಮಾರಿಗೆ ತಹಸೀಲ್ದಾರವರ ಆದೇಶದ ಮೇರೆಗೆ ಸಿಂಧನೂರು ಗ್ರಾಮೀಣ ಪೋಲಿಸ್ ಠಾಣೆ ಪಿ.ಎಸ್.ಐ ಅವರು ಮತ್ತು ಸಿಬ್ಬಂದಿಗಳು ಹಾಗೂ ನಮ್ಮ ಸಂಘಟನೆ ಪದಾಧಿಕಾರಿಗಳೊಂದಿಗೆ ಮತ್ತು ಕಂದಾಯ ಅಧಿಕಾರಿಗಳ ಜೊತೆಗೆ ಹೋಗಿ ಸ್ಥಳ ಪರಿಶೀಲನೆ ಮಾಡಿದಾಗ, ಸದರಿ ಜಮೀನಿನಲ್ಲಿ ಸುಮಾರು 27 ಟಿಪ್ಪರ್ಗಳು ಮತ್ತು 9 ಜೆಸಿಬಿಗಳು ಅಕ್ರಮವಾಗಿ ಮಣ್ಣು ತುಂಬುವ ಕೆಲಸವನ್ನು ಮಾಡುತ್ತಿರುವದು ಕಂಡು ಬಂದಿರುತ್ತದೆ” ಎಂದು ತಿಳಿಸಿದ್ದಾರೆ.
“ಆಗ ಪೋಲಿಸ್ ಅಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ಗುತ್ತಿಗೆದಾರ ಎಂ.ಡಿ. ಕೋಟೇಶ್ವರರಾವ್ ಮತ್ತು ಇತರರಿಗೆ ವಿಚಾರಿಸಲಾಗಿ ಅಧಿಕಾರಿಗಳಿಗೆ ಸರಿಯಾದ ಉತ್ತರ ನೀಡದೇ ಮತ್ತು ಪೋಲಿಸರ ಮೇಲೆ ಹಾಗೂ ಕಂದಾಯ ಅಧಿಕಾರಿಗಳ ಮೇಲೆ ಗೂಂಡಾಗಳನ್ನು ಕರೆಯಿಸಿ ಹಲ್ಲೆ ಮಾಡಲು ಯತ್ನಿಸಿರುತ್ತಾನೆ. ಈ ಕುರಿತಂತೆ ನಮ್ಮ ಸಂಘಟನೆ ಪಧಾದಿಕಾರಿಗಳು ಪೋಟೋ ಮತ್ತು ವಿಡಿಯೋಗಳನ್ನು ಮೊಬೈಲಿನಲ್ಲಿ ಚಿತ್ರೀಕರಿಸುವಾಗ ಕೋಟೇಶ್ವರರಾವ್ ಸಹಚರರು ಹಲ್ಲೆ ಮಾಡಲು ಯತ್ನಿಸಿರುತ್ತಾರೆ. ನಂತರ ಪೋಲಿಸ್ ಅಧಿಕಾರಿಗಳು ಈ ಜಮೀನಿನ ಕ್ವಾರಿಯಲ್ಲಿ ಮಣ್ಣು ತುಂಬಿಕೊಂಡು ನಿಂತಿದ್ದ ಲಾರಿಗಳನ್ನು ಜಪ್ತಿ ಮಾಡಿ ಗ್ರಾಮೀಣ ಪೋಲಿಸ್ ಠಾಣೆಗೆ ತೆಗೆದುಕೊಂಡು ಬಂದಿರುತ್ತಾರೆ” ಎಂದು ಅವರು ವಿವರಿಸಿರುತ್ತಾರೆ.
ಹೊಂಡವಾದ ವ್ಯವಸಾಯದ ಭೂಮಿ
ವ್ಯವಸಾಯದ ಜಮೀನಿನಲ್ಲಿ ಅಕ್ರಮವಾಗಿ ಅಗೆದು ಮಣ್ಣನ್ನು ಕಾನೂನುಬಾಹಿರವಾಗಿ ರೈಲ್ವೆ ಕಾಮಗಾರಿಗೆ ಬಳಸುತ್ತಿದ್ದು, ಆದರೆ ಈ ಜಮೀನುಗಳನ್ನು ಸರ್ಕಾರ ಪುನರ್ವಸತಿ ಯೋಜನೆಯಡಿಯಲ್ಲಿ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸಲು ಫಲಾನುಭವಿಗಳಿಗೆ ಈ ಹಿಂದೆ ನೀಡಿರುತ್ತದೆ. ಆದರೆ ಕೆಲವರು ಹಣದ ಆಸೆಗಾಗಿ, ಗುತ್ತಿಗೆದಾರರ ಒತ್ತಡದಿಂದ ಮಣ್ಣು ಮಾರಾಟ ಮಾಡಿ ಫಲವತ್ತಾದ ಸಾಗುವಳಿ ಜಮೀನಿಗಳನ್ನು ಬಂಜರ ಹಾಗೂ ಆಳವಾದ ಹೊಂಡಗಳನ್ನಾಗಿ ಮಾಡಲಾಗಿರುತ್ತದೆ. ಈ ಕೂಡಲೇ ಮೇಲಾಧಿಕಾರಿಗಳು ಈ ಅಕ್ರಮ ಮಣ್ಣು ಸಾಗಾಣಿಕೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು” ಎಂದು ರಮೇಶ್ ಪಾಟೀಲ್ ಭೇರಿಗಿ ಹಾಗೂ ಚಿಟ್ಟಿಬಾಬು ಅವರು ಆಗ್ರಹಿಸಿರುತ್ತಾರೆ. ಒಂದುವೇಳೆ ಕಾನೂನು ಕ್ರಮ ಜರುಗಿಸದೇ ಇದ್ದ ಪಕ್ಷದಲ್ಲಿ ಸೂಕ್ತ ದಾಖಲೆಗಳೊಂದಿಗೆ ಸಂಬAಧಿಸಿದ ಇಲಾಖೆಯ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.

