ಲೋಕಲ್ ನ್ಯೂಸ್ ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 09, 2026
ತಾಲ್ಲೂಕಿನ ಆರ್.ಎಚ್. ನಂ: 1 ಗ್ರಾಮದ ಸರ್ವೆ ನಂ: 321 /322 /239 ಹಾಗೂ ಸರ್ವೆ ನಂ: 311/* /179 ಜಮೀನುಗಳಲ್ಲಿ, ಜಮೀನಿನ ಮಾಲೀಕರು ಮತ್ತು ಗುತ್ತಿಗೆದಾರರು ಸೇರಿಕೊಂಡು ಯಾವುದೇ ಪರವಾನಗಿ ಇಲ್ಲದೇ ವ್ಯವಸಾಯ ಭೂಮಿಯನ್ನು ಅಗೆದು ಮರಂ, ಮಣ್ಣನ್ನು ಲೂಟಿ ಮಾಡಿದ್ದು ಕೂಡಲೇ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಸಂಘದಿAದ ತಹಸೀಲ್ದಾರ್ ಅರುಣ ದೇಸಾಯಿ ಅವರಿಗೆ ದಿ: 08-06-2026ರಂದು ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
“ಆರ್.ಎಚ್. ನಂ: 1ರಲ್ಲಿ ಬಾಂಗ್ಲಾ ನಿರಾಶ್ರಿತರಿಗೆ ಸರ್ಕಾರ ಈ ಹಿಂದೆ ವ್ಯವಸಾಯ ಮಾಡಿಕೊಂಡು ಹೋಗಲು ಕೃಷಿಯೋಗ್ಯ ಜಮೀನು ನೀಡಿದೆ. ಆದರೆ ಕೆಲ ಪ್ರಭಾವಿಗಳ ಹಾಗೂ ಗುತ್ತಿಗೆದಾರರ ಚಿತಾವಣೆಯಿಂದ, ಭೂಮಾಲೀಕರಿಗೆ ಹಣದ ಆಸೆ ತೋರಿಸಿ ಇನ್ನೂ ಕೆಲವರ ಮೇಲೆ ಒತ್ತಡ ಹೇರಿ ಫಲವತ್ತಾದ ಭೂಮಿಯನ್ನು ಹಿಟಾಚಿಗಳಿಂದ ಆರೇಳು ಮೀಟರ್ನಷ್ಟು ಆಳಕ್ಕೆ ಅಗೆದು ಮಣ್ಣು ಮತ್ತು ಮರಂ ಅನ್ನು ಲೂಟಿ ಹೊಡೆಯಲಾಗಿದೆ. ವಿವಿಧ ಬೆಳೆಯನ್ನು ಬೆಳೆಯುತ್ತಿದ್ದ ನೀರಾವರಿ ಭೂಮಿ ಇಂದು ಬರಡು ಭೂಮಿಯಾಗಿದೆ. ಕೃಷಿ ಭೂಮಿಯನ್ನು ಈ ರೀತಿ ಅನಧಿಕೃತವಾಗಿ ಮತ್ತು ಅಕ್ರಮವಾಗಿ ಅಗೆಯುತ್ತ ಹೋದರೆ ಕೃಷಿಭೂಮಿಯ ಗತಿಯೇನು” ಎಂದು ಕರ್ನಾಟಕ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಪಾಟೀಲ್ ತಹಸೀಲ್ದಾರ್ ಅವರನ್ನು ಗಮನ ಸೆಳೆದಿದ್ದಾರೆ.
“ಪುನರ್ವಸತಿ ಕ್ಯಾಂಪ್ 1ರ ಜಮೀನು ಸರ್ವೆ ನಂ: 321 /322 /239 ಹಾಗೂ ಸರ್ವೆ ನಂ: 311/* /179 ಜಮೀನುಗಳ ಮಣ್ಣು ಮತ್ತು ಮರಂನ್ನು ಅಗೆದು ಬರಡು ಭೂಮಿ ಮಾಡಿರುವವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಇಲ್ಲದೇ ಹೋದಲ್ಲಿ ಕರ್ನಾಟಕ ರೈತ ಸಂಘದಿAದ ತಹಸಿಲ್ ಕಾರ್ಯಾಲಯದ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು” ಎಂದು ರಾಜ್ಯ ಘಟಕದ ಕಾರ್ಯದರ್ಶಿ ಚಿಟ್ಟಿಬಾಬು ಬೂದಿವಾಳಕ್ಯಾಂಪ್ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಮಲ್ಲಯ್ಯಸ್ವಾಮಿ, ನಾಗರಾಜಗೌಡ ಸಿಂಗಾಪುರ, ನಾಗಪ್ಪ.ಕೆ ಇನ್ನಿತರರಿದ್ದರು.
