ನಮ್ಮ ಸಿಂಧನೂರು ಸ್ಪೆಷಲ್ ಸುದ್ದಿ
ರಾಯಚೂರು/ಸಿಂಧನೂರು ಅಕ್ಟೋಬರ್ 10
ಹಲವು ವರ್ಷಗಳಿಂದ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರು ಸೇವೆ ಸಲ್ಲಿಸುತ್ತಿದ್ದು, ಅವರನ್ನು ಖಾಯಂಗೊಳಿಸಬೇಕು ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಸರಕಾರಿ ಹೊರಗುತ್ತಿಗೆ ನೌಕರರ ಸಂಘದ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ಗುಂಜಳ್ಳಿ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಮಹಿಳಾ ನೌಕರರಿಗೆ ಖಾಯಂ ನೌಕರರಂತೆಯೇ ವೇತನ ಸಹಿತ ಹೆರಿಗೆ ರಜೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ, ಇತ್ತೀಚೆಗೆ ರಾಯಚೂರು ನಗರಕ್ಕೆ ಭೇಟಿ ನೀಡಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷಿö್ಮ ಚೌದರಿ ಅವರಿಗೆ ಮನವಿ ಸಲ್ಲಿಸಿ, ಸರಕಾರಿ ಹೊರಗುತ್ತಿಗೆ ನೌಕರರು ಅನುಭವಿಸುತ್ತಿರುವ ಸಂಕಷ್ಟ, ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಈ ಕುರಿತು ಅವರು ಸರ್ಕಾರದ ಗಮನ ಸೆಳೆದು ನೌಕರರ ಹಕ್ಕೊತ್ತಾಯಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇನೆಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಇದು ನೌಕರರಲ್ಲಿ ಹೊಸ ಆಶಾವಾದ ಮೂಡಿಸಿದೆ ಎಂದು ಗುಂಜಳ್ಳಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷರಾದ ಶ್ರೀದೇವಿ ಶ್ರೀನಿವಾಸ್, ರಾಯಚೂರು ತಾಲೂಕ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷರಾದ ಈರಮ್ಮ ಗುಂಜಳ್ಳಿ, ನೌಕರರಾದ ವೀರೇಶ್, ನಾಗೇಂದ್ರ.ಪಿ, ಶಿವಕುಮಾರ್, ಶಿವನ್ಪಾಶ ಇನ್ನಿತರರಿದ್ದರು.

“ಸರ್ಕಾರಿ ನೌಕರರಂತೆ ಹೊರಗುತ್ತಿಗೆ ನೌಕರರಿಗೂ ರಜೆ, ಭತ್ಯೆ ಸೌಲಭ್ಯ ನೀಡಲಿ”
“ಸರ್ಕಾರ ಖಾಯಂ ಮಹಿಳಾ ನೌಕರರಿಗೆ ನೀಡುವಂತೆಯೇ ಹೊರಗುತ್ತಿಗೆ ಮಹಿಳಾ ನೌಕರರಿಗೂ ವೇತನ ಸಹಿತ ಹೆರಿಗೆ ರಜೆ ಸೌಲಭ್ಯ ಕಲ್ಪಿಸಬೇಕು. ಹೊರಗುತ್ತಿಗೆಯಡಿ ಸೇವೆ ಸಲ್ಲಿಸುವ ಮಹಿಳಾ ನೌಕರರು ಆರ್ಥಿಕವಾಗಿ ದುರ್ಬಲರಾಗಿರುವುದರಿಂದ ಹೆರಿಗೆ ಸಮಯದಲ್ಲಿ ಅರ್ಥಿಕ ಸಂಕಷ್ಟಕ್ಕೆ ಸಿಲುಕದಂತೆ ಹಾಗೂ ಅವರ ಆರೋಗ್ಯದ ಹಿತದೃಷ್ಟಿಯಿಂದ ಭತ್ಯೆ, ರಜಾ ಸೌಲಭ್ಯ ಕಡ್ಡಾಯವಾಗಿ ನೀಡಬೇಕು. ಹೆರಿಗೆ ವಿಷಯದಲ್ಲಿ ಸರ್ಕಾರಿ ನೌಕರರು ಹಾಗೂ ಹೊರಗುತ್ತಿಗೆ ನೌಕರರು ಎಂಬ ತಾರತಮ್ಯ ಮಾಡದೇ ಎಲ್ಲ ರೀತಿಯ ಅನುಕೂಲಗಳನ್ನು ಮತ್ತು ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸರ್ಕಾರ ಮಾನವೀಯತೆ ನೆಲೆಯಲ್ಲಿ ನೌಕರರನ್ನು ಪರಿಗಣಿಸಬೇಕು” ಎಂದು ಗುಂಜಳ್ಳಿಯವರು ಸರ್ಕಾರದ ಗಮನ ಸೆಳೆದಿದ್ದಾರೆ.

“ಸಕಾಲದಲ್ಲಿ ನೌಕರರಿಗೆ ವೇತನ ಪಾವತಿಯಾಗಲಿ”
“ಹೊರಗುತ್ತಿಗೆ ನೌಕರರು ಜೀತಪದ್ಧತಿಯಂತೆ ದುಡಿಯಬೇಕಾಗಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ಪಡೆಯಲು ಸಂಪೂರ್ಣ ಅರ್ಹರಿರುತ್ತಾರೆ. ಇಂದಿಗೂ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಪಾವತಿಯಾಗುತ್ತಿಲ್ಲ. ಅದರಲ್ಲೂ ಸಕಾಲದಲ್ಲಿ ಸಂಬಳ ಕೈಗೆ ಸಿಗುತ್ತಿಲ್ಲವೆಂಬ ದೂರುಗಳು ಹೆಚ್ಚಿವೆ. ಇದರಿಂದ ಸರಕಾರಿ ಹೊರಗುತ್ತಿಗೆ ನೌಕರರು ಕುಟುಂಬ ನಿರ್ವಹಣೆಗೆ ಸಾಲ-ಸೋಲ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕೆಲ ಉದ್ಯೋಗಿಗಳು ಮಕ್ಕಳ ಶಿಕ್ಷಣ, ಚಿಕಿತ್ಸೆ ಹಾಗೂ ತುರ್ತು ಸಂದರ್ಭದಲ್ಲಿ ಲೇವಾದೇವಿದಾರರ ಬಳಿ ಸಾಲಕ್ಕಾಗಿ ಕೈವೊಡ್ಡುವಂತಾಗಿದೆ. ದಕ್ಷತೆ, ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕೆಲಸ ಮಾಡುವ ಸರಕಾರಿ ಹೊರಗುತ್ತಿಗೆ ನೌಕರರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಏಜೆನ್ಸಿಗಳಿಂದ ಹೆಚ್ಚುತ್ತಿರುವ ಕಿರುಕುಳ”
“ಹೊರಗುತ್ತಿಗೆ ನೌಕರರಿಗೆ ಏಜೆನ್ಸಿಗಳು ಸರಿಯಾದ ಸಮಯಕ್ಕೆ ವೇತನ ಪಾವತಿ ಮಾಡದಿರುವುದು, ಮರ್ನಾಲ್ಕು ತಿಂಗಳ ವೇತನ ಬಾಕಿ ಉಳಿಸಿಕೊಳ್ಳುವುದು ಸೇರಿದಂತೆ ಅನಗತ್ಯವಾಗಿ ಕಿರುಕುಳ ನೀಡುತ್ತ ಬರುತ್ತಿವೆ. ಇದರಿಂದ ನೌಕರರು ರೋಸಿ ಹೋಗಿದ್ದಾರೆ. ಸರಕಾರಿ ಹೊರಗುತ್ತಿಗೆ ನೌಕರರು ಕಡಿಮೆ ವೇತನಕ್ಕೆ ಸೇವೆ ಸಲ್ಲಿಸುತ್ತಿರುವುದರಿಂದ ಕುಟುಂಬ ನಿರ್ವಹಣೆಗೆ ಈ ವೇತನ ಸಾಕಾಗುವುದಿಲ್ಲ. ಈ ನಡುವೆ ಉಳಿತಾಯವಂತೂ ಅಸಾಧ್ಯದ ಮಾತಾಗಿದೆ. ಆದರೆ, ಇದನ್ನು ಅರ್ಥಮಾಡಿಕೊಳ್ಳದ ಏಜೆನ್ಸಿಗಳು ವೇತನ ವಿಳಂಬದ ಮೂಲಕ ನೌಕರರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತಿವೆ. ಪ್ರತಿ ಮಾಹೆ ನಿಗದಿಪಡಿಸಿದ ದಿನಾಂಕದAದು ವೇತನ ಪಾವತಿ ಮಾಡದ ಏಜೆನ್ಸಿಗಳ ವಿರುದ್ಧ ಸರ್ಕಾರ ಆಯಾ ಇಲಾಖೆಗಳ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸೂಚನೆ ನೀಡಿದಾಗ್ಯೂ ಪದೇ ಪದೆ ಆ ರೀತಿ ಮಾಡುವ ಏಜೆನ್ಸಿಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು” ಎಂದು ರಾಜಶೇಖರ ಗುಂಜಳ್ಳಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹಕ್ಕೊತ್ತಾಯಗಳು
ಸೇವೆ ಖಾಯಂಮಾತಿ ಮಾಡಬೇಕು., ಖಾಯಂಗೊಳಿಸುವವರೆಗೂ ಕನಿಷ್ಠ ವೇತನ ನಿಗದಿಪಡಿಸಬೇಕು, ಮಹಿಳಾ ಸರಕಾರಿ ಹೊರಗುತ್ತಿಗೆ ನೌಕರರಿಗೆ ವೇತನ ಸಹಿತ ರಜೆ ಮಂಜೂರಾತಿ ನೀಡಬೇಕು, ಪ್ರತಿ ತಿಂಗಳು ನಿಗದಿಪಡಿಸಿದ ದಿನದಂದು ತಪ್ಪದೇ ವೇತನವನ್ನು ನೌಕರರ ಖಾತೆಗೆ ಜಮಾ ಮಾಡಬೇಕು, ಕೆಲಸದ ನವೀಕರಣಕ್ಕೆ (ರಿನ್ಯೂವಲ್) ಸಂಬAಧಿಸಿದAತೆ ಪ್ರತಿವರ್ಷದ ಬದಲಾಗಿ, ಐದು ವರ್ಷಗಳಿಗೊಂದು ಬಾರಿ ನವೀಕರಣ ಪದ್ಧತಿ ಜಾರಿಗೊಳಿಸಬೇಕು, ಖಾಯಂ ನೌಕರರಂತೆ ರಜಾ ಸೌಲಭ್ಯಗಳನ್ನು ಮಂಜೂರಾತಿ ನೀಡಬೇಕು ಸೇರಿದಂತೆ ಇನ್ನಿತರೆ ಹಕ್ಕೊತ್ತಾಗಳನ್ನು ಸರಕಾರ ಈಡೇರಿಸಬೇಕು ಎಂದು ಗುಂಜಳ್ಳಿ ಅವರು ಒತ್ತಾಯಿಸಿದ್ದಾರೆ.
