ಲೋಕಲ್ ನ್ಯೂಸ್: ಬಸವರಾಜ ಹಸಮಕಲ್
ನಮ್ಮ ಸಿಂಧನೂರು, ಏಪ್ರಿಲ್ 27
ತಾಲೂಕಿನ ಕೆ.ಬಸಾಪುರ ಗ್ರಾಮದಿಂದ ಸಿಂಧನೂರಿಗೆ ತೆರಳುತ್ತಿದ್ದ ಕೆಕೆಆರ್ಟಿಸಿಯ ಬಸ್, ಜಾಲಿಹಾಳ ಸಮೀಪ ಎಕ್ಸೆಲ್ ಕಟ್ ಆಗಿ ಜಮೀನಿಗೆ ನುಗ್ಗಿದ್ದು, ಅದೃಷ್ಟವಶಾತ್ 50ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಆರೇಳು ಜನರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಸೋಮವಾರ ಬೆಳಿಗ್ಗೆ 9.45ರ ಸುಮಾರು ನಡೆದಿದೆ.
“ಸಾರಿಗೆ ಬಸ್ ಮಾರ್ಗಮಧ್ಯೆ ಸಾಗುವಾಗ ದಿಢೀರ್ ತಾಂತ್ರಿಕ ದೋಷ ಕಂಡುಬಂದು ಎಕ್ಸೆಲ್ ಕಟ್ ಆಯಿತು. ಏಕ್ದಂ ರಸ್ತೆ ಪಕ್ಕದ ಜಮೀನಿನ ಹೊಲಗಾಲುವೆಗೆ ನುಗ್ಗಿತು. ಆದರೆ ಪಲ್ಟಿ ಹೊಡೆಯಲಿಲ್ಲ. ಸಮೀಪದಲ್ಲಿ ವಿದ್ಯುತ್ ಕಂಬ ಇತ್ತು. ಕಂಬಕ್ಕೆ ಡಿಕ್ಕಿ ಹೊಡೆದಿದ್ದರೆ ದೊಡ್ಡ ಅಪಾಯವೇ ಕಾದಿತ್ತು” ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

“ನಮ್ಮೂರು ಕಡೆ ಡಕೋಟಾ ಬಸ್ ಬುಡ್ತಾರೆ ನೋಡ್ರಿ”
“ಭಾಳ ದಿನದಿಂದ ನಮ್ಮೂರ ಕಡೆ ಡಕೋಟಾ ಬಸ್ ಬುಡ್ತಾರ್ರಿ. ನಾಲ್ಕಾರು ಸಲ ಡಿಪೋ ಮ್ಯಾನೇಜರ್ ಅವರನ್ನ ಬೆಟ್ಟಿ ಆಗಿ ಚಲೋ ಬಸ್ ಬಿಡ್ರಿ, ನಮ್ಮೂರು ಕಡೆ ದಾರಿ ಸರೀಗಿಲ್ಲ ಅಂತೇಳಿದ್ರು, ಇಂತ ಬಸ್ಸು ಬುಡ್ತಾರ್ ನೋಡ್ರಿ. ಬಸ್ ಪಲ್ಟಿ ಹೊಡದು ಏನಾರ ಆಗಿತ್ತಂದ್ರ, ಗೌರ್ನಮೆಂಟೋರು ಜೀವಾ ಕೊಡ್ತಾರೇನ್ರಿ” ಎಂದು ಪ್ರಯಾಣಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

