ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 08
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ಶೂ ಎಸೆದು, ಸಂವಿಧಾನ ಮತ್ತು ನ್ಯಾಯಾಂಗದ ಮೇಲೆ ದಾಳಿ ನಡೆಸಿರುವ ಮನುವಾದಿಯ ವಿರುದ್ಧ ಕಠಿಣ ಕ್ರಮ ಜರುಗಿಸಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಬೇಕೆಂದು ಒತ್ತಾಯಿಸಿ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ರಾಯಚೂರು ಜಿಲ್ಲಾ ಸಮಿತಿ ವತಿಯಿಂದ ಲಿಂಗಸುಗೂರಿನಲ್ಲಿ ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲ್ಶೆಟ್ಟಿ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಬುಧವಾರ ಮನವಿ ರವಾನಿಸಲಾಯಿತು.

ದಲಿತ ಸಮುದಾಯದಿಂದ ಬಂದು ಕಷ್ಟಕೋಟಲೆಗಳನ್ನು ಎದುರಿಸಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಡಮಾಡಿದ ಸಂವಿಧಾನದ ಅತ್ಯಂತ ಉನ್ನತ ಹುದ್ದೆಯಾದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಪದವಿ ಅಲಕಂಕರಿಸಿದ್ದನ್ನು ಸಹಿಸದ ಸಂಘ ಪರಿವಾರ ಮತ್ತು ಅದರ ಹಿಂದಿನ ಫ್ಯಾಸಿಸ್ಟ್ ಶಕ್ತಿಗಳು ನಡೆಸಿದ ವ್ಯವಸ್ಥಿತ ಪಿತೂರಿಯ ಭಾಗವಾಗಿದ್ದು, ಶೂ ಎಸೆದ ದಾಳಿಕೋರ ಕೋರ್ಟ್ ಆವರಣದಿಂದ ಹೊರ ನಡೆಯುವ ಸಮಯದಲ್ಲಿ “ಸನಾತನ ಧರ್ಮದ ಅಪಮಾನ ಸಹಿಸುವುದಿಲ್ಲ” ಎಂದು ಕೂಗಿದ್ದು, ಸಂಘ ಪರಿವಾರ ಮುಖವಾಡ ಬಯಲಾಗಿದೆ. ಇದು ಕೇವಲ ನ್ಯಾಯಾಧೀಶರ ಮೇಲಿನ ದಾಳಿಯಲ್ಲ; ಸಂವಿಧಾನ ಮತ್ತು ನ್ಯಾಯಾಂಗದ ಮೇಲಿನ ದುರಾಕ್ರಮಣವಾಗಿದೆ ಎಂದು ಸಂಘಟಕರು ಮನವಿಯಲ್ಲಿ ಗಮನ ಸೆಳೆದಿದ್ದಾರೆ
ದುಷ್ಕೃತ್ಯ ಎಸಗಿದ ವಕೀಲನ ವಿರುದ್ಧ ದೇಶದ್ರೋಹಿ ಕಾನೂನಿನಡಿ ಕೇಸ್ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕು, ಸಿಜೆಐ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು, ಇಂತಹ ದುಷ್ಕೃತ್ಯಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಮಿತಿಯ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ.ಕೆ, ಉಪಾಧ್ಯಕ್ಷ ಜಮದಗ್ನಿ ಕೋಠಾ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಶಿವಪ್ಪ ಮ್ಯಾಗೇರಿ, ದಲಿತ ಸಮರ ಸೇನೆ ಜಿಲ್ಲಾ ಅಧ್ಯಕ್ಷ ನೀಲಕಂಠ ಅನಿಲ್, ಅಶ್ವತ್, ರಾಬಿಯ, ರೇಣುಕಾ, ಶಂಕರ್, ಮಾಬಮ್ಮ, ಈರಮ್ಮ ಸೇರಿದಂತೆ ಇನ್ನಿತರರು ಇದ್ದರು.
