ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಆಗಸ್ಟ್ 20
ರಾಜ್ಯದಲ್ಲಿ ಕಳೆದ 9ರಿಂದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬೆಳೆ ಸಮೀಕ್ಷೆದಾರರನ್ನು ಖಾಯಂಗೊಳಿಸುವ ಮೂಲಕ ಸರ್ಕಾರದಿಂದ ದೊರೆಯುವ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸುವಂತೆ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಚಂದ್ರೇಶ ಒತ್ತಾಯಿಸಿದ್ದಾರೆ.
ಈ ಕುರಿತು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿರುವ ಅವರು, “ರಾಜ್ಯದಲ್ಲಿ ಕಳೆದ ಒಂದು ದಶಕದಿಂದ ಬೆಳೆ ಸಮೀಕ್ಷೆದಾರರೆಂದು ಸೇವೆ ಸಲ್ಲಿಸುತ್ತಾ ಬಂದಿರುತ್ತೆವೆ. ಜಮೀನುಗಳಲ್ಲಿ ಬೆಳೆ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಹಾವು, ಚೇಳು ಸೇರಿದಂತೆ ಇನ್ನಿತರೆ ವಿಷಜಂತುಗಳಿಂದ ತೊಂದರೆ ಅನುಭವಿಸಿರುತ್ತೇವೆ. ಅಷ್ಟೇ ಅಲ್ಲದೇ ಕಾಡು ಪ್ರಾಣಿಗಳಿಂದ ಆತಂಕ ಎದುರಿಸಿರುತ್ತೇವೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಹಾಗೂ ಕೋಡ್ಲಾ ಎಂಬ ಗ್ರಾಮದಲ್ಲಿ ಇಬ್ಬರು ಬೆಳೆ ಸಮೀಕ್ಷೆದಾರರಿಗೆ ಹಾವುಕಚ್ಚಿ ಸಮಸ್ಯೆ ಅನುಭವಿಸಿರುತ್ತಾರೆ. ಈ ಕುರಿತು ಸಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಸಲ್ಲಿಸಿದ್ದರು ಪರಿಹಾರ ನೀಡಿರುವುದಿಲ್ಲ. ಬೆಳೆ ಸಮೀಕ್ಷೆದಾರರು ಜೀವದ ಆಸೆ ತೊರೆದು, ಶ್ರದ್ಧೆಯಿಂದ ಸರ್ಕಾರದ ಸೇವೆ ಮಾಡುತ್ತಿದ್ದರೂ, ಸಮೀಕ್ಷೆ ಮಾಡುವಾಗ ಕೆಲವು ರೈತರು ನೀವು ಯಾರೆಂದು ಪ್ರಶ್ನೆ ಮಾಡುತ್ತಾರೆ” ಎಂದು ಮನವಿಪತ್ರದಲ್ಲಿ ಅಳಲನ್ನು ತೋಡಿಕೊಂಡಿದ್ದಾರೆ.
ʼಹೈಕೋರ್ಟ್ ಆದೇಶ ಸರ್ಕಾರ ಪಾಲಿಸಲು ಮನವಿʼ
“ನಾವು ಈಗಾಗಲೇ ರಾಜ್ಯದಲ್ಲಿ ಸರಿಸುಮಾರು 25 ರಿಂದ 30 ಸಾವಿರ ಬೆಳೆ ಸಮೀಕ್ಷೆದಾರರಿದ್ದು, ಈಗಾಗಲೇ ಹೈಕೋರ್ಟ್ ಆದೇಶದಂತೆ 10 ವರ್ಷಗಳ ಕಾಲ ಕೆಲಸ ನಿರ್ವಹಿಸಿದ ದಿನಗೂಲಿ ಕೆಲಸಗಾರರನ್ನು ಖಾಯಂ ಸೇವೆಗೊಳಿಸಲು ಅನುಮತಿ ನೀಡಿರುತ್ತದೆ. ಆದಕಾರಣ ನಮಗೆ ದಿನಗೂಲಿ ಆದಾರದ ಮೇಲೆ ದಿನಾಲೂ ಕೆಲಸ ನೀಡಬೇಕು ಹಾಗೂ ಜೀವ ವಿಮೇ ಒದಗಿಸಬೇಕು ಮತ್ತು ಎಲ್ಲಾ ಬೆಳೆ ಸಮೀಕ್ಷೆದಾರಿಗೆ ರೇನ್ ಕೋಟ್ ನೀಡಬೇಕು, ಗುರುತಿನ ಚೀಟಿ, ಶೂ ನೀಡಬೇಕು” ಎಂದು ಮನವಿಯಲ್ಲಿ ಚಂದ್ರೇಶ ಒತ್ತಾಯಿಸಿದ್ದಾರೆ.
