ಲೋಕಲ್ ನ್ಯೂಸ್: ಬಸವರಾಜ ಹಳ್ಳಿ, ಹಸಮಕಲ್
ನಮ್ಮ ಸಿಂಧನೂರು, ಜೂನ್ 06, 2026
ನಗರದ 150ಎ ಹೆದ್ದಾರಿ ರಾಯಚೂರು ಮಾರ್ಗದ ರಸ್ತೆಯಲ್ಲಿ ಬಿಡಾಡಿ ದನಗಳ ಉಪಟಳಕ್ಕೆ ವಾಹನ ಚಾಲಕರು ದಿನವೂ ಕಿರಿಕಿರಿ ಅನುಭವಿಸುತ್ತಿದ್ದಾರೆ. ಒಮ್ಮೊಮ್ಮೆ ದುತ್ತನೇ ಓಡುವ ದನಗಳು, ಮತ್ತೊಮ್ಮೆ ನಡು ರಸ್ತೆಯಲ್ಲಿ ಮಲಗುವುದರಿಂದ ಸಾರಿಗೆ ಬಸ್ಸು, ಲಾರಿ, ದ್ವಿಚಕ್ರ ವಾಹನ ಚಲಾಯಿಸಲು ಚಾಲಕರು ತೊಂದರೆ ಎದುರಿಸುತ್ತಿದ್ದಾರೆ.
ಈ ಮಾರ್ಗದ ರಸ್ತೆಯು ದಿನವೂ ಜನಸಂದಣಿಯಿಂದ ಕೂಡಿರುತ್ತದೆ. ಆದರೆ ಬೀಡಾಡಿ ದನಗಳು, ವಾಲ್ಮೀಕಿ ಸರ್ಕಲ್ನಿಂದ ಹಳ್ಳದವರೆಗಿನ ಹೆದ್ದಾರಿಯಲ್ಲಿ ಅದರಲ್ಲೂ, ಕನಕದಾಸ ಸರ್ಕಲ್ ಇಲ್ಲವೇ ಕಿತ್ತೂರು ರಾಣಿ ಚನ್ನ ಸರ್ಕಲ್, ನಗರಸಭೆ ಮುಂಭಾಗದ ರಸ್ತೆಯಲ್ಲಿ ಎಲ್ಲೆಂದರಲ್ಲಿ ಮಲಗುವುದರಿಂದ ಸುಗಮ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ. ಇನ್ನೂ ಸಂಚಾರಿ ಠಾಣೆ ಪೊಲೀಸರು ವಾಹನ ದಟ್ಟಣೆಯ ಜೊತೆಗೆ ಈ ದಿನಗಳನ್ನು ಓಡಿಸುವ ಕೆಲಸ ಮಾಡುವಂತಾಗಿದೆ ಎಂದು ಪ್ರಯಾಣಿಕರೊಬ್ಬರು ಹೇಳುತ್ತಾರೆ.
ಹೆಚ್ಚುತ್ತಿರುವ ಅವಘಡ, ಪಾದಚಾರಿಗಳಿಗೆ ಜೀವ ಭಯ ?
ನಡು ರಸ್ತೆಯಲ್ಲಿ ಬೀಡಾಡಿ ದನಗಳು ಮಲಗುವುದರಿಂದ ವಾಹನ ಚಾಲಕರು ಪಾದಾಚಾರಿ ರಸ್ತೆಯತ್ತ ವಾಹನಗಳನ್ನು ನುಗ್ಗಿಸುತ್ತಿದ್ದು, ಪಾದಾಚಾರಿಗಳು ಜೀವಭಯ ಎದುರಿಸುತ್ತಿದ್ದಾರೆ. ಇನ್ನೂ ಬೀಡಾಡಿ ದನಗಳು ಅಡ್ಡಾದಿಡ್ಡಿಯಾಗಿ ಎದುರಿಗೆ ಬಂದು ಹಲವಾರು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ ಎಂದು ಸಾರ್ವಜನಿಕರು ವಿವರಿಸಿದ್ದಾರೆ.

