ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 12
ವಸತಿ ನಿಲಯಕ್ಕಾಗಿ ಖಾಸಗಿಯವರ ಕಟ್ಟಡ ಪಡೆದು ಬಾಡಿಗೆ ಪಾವತಿಸುವಲ್ಲಿ ವಿಳಂಬ ಮಾಡಿದ ಸಮಾಜ ಕಲ್ಯಾಣ ಇಲಾಖೆಯ ಸಾಮಗ್ರಿ ಜಪ್ತಿಗೆ ಸಿಂಧನೂರು ಹಿರಿಯ ಶ್ರೇಣಿ ನ್ಯಾಯಾಲಯ ಆದೇಶ ನೀಡಿದ್ದು, ಈ ಆದೇಶದ ಹಿನ್ನೆಲೆಯಲ್ಲಿ ಸೋಮವಾರ ಕಚೇರಿಯ ಸಾಮಗ್ರಿಗಳನ್ನು ಜಪ್ತಿ ಮಾಡಲಾಯಿತು. ಕಂಪ್ಯೂಟರ್, ಟೇಬಲ್, ಚೇರ್ ಇನ್ನಿತರೆ ಸಾಮಗ್ರಿಗಳನ್ನು ಕಚೇರಿಯಿಂದ ಹೊರತರಲಾಯಿತು.
ಪ್ರಕರಣದ ಹಿನ್ನೆಲೆ
ನಗರದ ಖಾಜಾಸಾಬ್ ತಂದೆ ಶಂಶುರ್ಸಾಬ್ ಪಿಡಬ್ಲ್ಯಡಿ ಕ್ಯಾಂಪ್ನಲ್ಲಿರುವ ತಮ್ಮ ಕಟ್ಟಡವನ್ನು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕಾಗಿ ಬಾಡಿಗೆ ಕೊಟ್ಟಿದ್ದರು. ಆದರೆ ಸಮಾಜ ಕಲ್ಯಾಣ ಇಲಾಖೆ ಸಕಾಲದಲ್ಲಿ ಬಾಡಿಗೆ ಪಾವತಿಸದೇ ವಿಳಂಬ ಧೋರಣೆ ಅನುಸರಿಸಿದ್ದರಿಂದ ದಿನಾಂಕ: 24-12-2020ರಂದು ಕೋರ್ಟ್ನಲ್ಲಿ ದಾವೆ (ಒ.ಎಸ್.ನಂ.228/2020) ಹೂಡಿದ್ದರು. ಕೋರ್ಟ್ 10,90,665 ರೂಪಾಯಿ ಬಾಡಿಗೆ ಹಾಗೂ ಬಡ್ಡಿ 8,17,980 ರೂಪಾಯಿ ಹಾಗೂ ಇತರೆ ಸೇರಿ 20,03,772 ರೂಪಾಯಿಯನ್ನು ಕಟ್ಟಡ ಮಾಲೀಕರಿಗೆ ಪಾವತಿಸುವಂತೆ ಸಮಾಜ ಕಲ್ಯಾಣ ಇಲಾಖೆಗೆ ಆದೇಶಿಸಿತ್ತು. ಆದರೆ ಇಲಾಖೆಯ ಅಧಿಕಾರಿಗಳು ಕೋರ್ಟ್ ಆದೇಶದಂತೆ ನಿಗದಿತ ಕಾಲಾವಧಿಯಲ್ಲಿ ಹಣವನ್ನು ಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ದಾವೆದಾರರ ಮನವಿಯನ್ನು ಮಾನ್ಯ ಮಾಡಿದ ಕೋರ್ಟ್, ಇಲಾಖೆ ಕಚೇರಿಯ ಸಾಮಗ್ರಿಗಳ ಜಪ್ತಿಗೆ ಆದೇಶ ಹೊರಡಿಸಿದೆ. ದಾವೆದಾರ ಖಾಜಾಸಾಬ್ ಪರ ವಕೀಲರಾದ ಎನ್.ರಾಮಗೌಡ ಅವರು ವಾದಿಸಿದ್ದರು.
