ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 15
ನಗರದ ಕುಷ್ಟಗಿ ಮಾರ್ಗದಲ್ಲಿರುವ ಸರ್ಕಾರಿ ಪದವಿ ಮಹಾವಿದ್ಯಾಲಯದ ಉದ್ದೇಶಿತ ನೂತನ ಕಟ್ಟಡ ನಿರ್ಮಾಣದ ಹಿನ್ನೆಲೆಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಅವರು ಕಾಲೇಜು ಆವರಣಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿಯೇ ತಾಲೂಕು ಕೇಂದ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಥಾಪನೆಗೊಂಡ ಪ್ರಪ್ರಥಮ ಕಾಲೇಜಾಗಿದ್ದು, ಕಳೆದ ಎರಡು ವರ್ಷಗಳ ಹಿಂದೆಯೇ ಈ ಕಾಲೇಜು 50 ವರ್ಷಗಳನ್ನು ಪೂರೈಸಿ ಸುವರ್ಣ ಮಹೋತ್ಸವವನ್ನು ಆಚರಿಸಿದೆ. ಪದವಿ ಕಾಲೇಜಿನ ಕಟ್ಟಡಗಳು ಹಳೆಯದಾಗಿರುವುದರಿಂದ ಅತ್ಯಾಧುನಿಕ ಶೈಲಿಯಲ್ಲಿ ಸುಸಜ್ಜಿತವಾಗಿ ಹೊಸ ಕಟ್ಟಡ ನಿರ್ಮಿಸಲು ಶಾಸಕ ಹಂಪನಗೌಡ ಬಾದರ್ಲಿ ಅವರು ಸರ್ಕಾರದ ಗಮನ ಸೆಳೆದಿದ್ದರು. ಕಳೆದ ದಸರಾ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಹೊಸ ಕಾಲೇಜು ಕಟ್ಟಡಕ್ಕೆ ಅನುದಾನ ಒದಗಿಸಿ ಶೈಕ್ಷಣಿಕ ಪ್ರಗತಿಗೆ ಅನುಕೂಲ ಕಲ್ಪಿಸುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಅನುದಾನ ಮಂಜೂರಾಗಿದೆ ಎಂದು ತಿಳಿದುಬಂದಿದೆ.

ನೀಲನಕ್ಷೆ ಪರಿಶೀಲನೆ
ಉದ್ದೇಶಿತ ಪದವಿ ಮಹಾವಿದ್ಯಾಲಯದ ನೀಲನಕ್ಷೆ, ಜಾಗ ಹಾಗೂ ಕ್ರೀಡಾಂಗಣ ಪ್ರದೇಶವನ್ನು ವೀಕ್ಷಿಸಿದ ಶಾಸಕ ಹಂಪನಗೌಡ ಬಾದರ್ಲಿಯವರು ಎಂಜಿನಿಯರ್ ಸೇರಿದಂತೆ ಕಾಲೇಜಿನ ಸಿಬ್ಬಂದಿಯೊAದಿಗೆ ಕೆಲಕಾಲ ಚರ್ಚಿಸಿದರು. ಪದವಿ ಮಹಾವಿದ್ಯಾಲಯದ ಆವರಣ ದೊಡ್ಡದಾಗಿದ್ದು, ಈ ಜಾಗವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಸುಸಜ್ಜಿತ ಮತ್ತು ಆಧುನಿಕ ಶೈಲಿಯಲ್ಲಿ ವಿವಿ ಮಾದರಿಯಲ್ಲಿ ಮಹಾವಿದ್ಯಾಲಯ ಕಟ್ಟಡ ನಿರ್ಮಿಸಬೇಕು. ವಿದ್ಯಾರ್ಥಿಗಳಿಗೆ ಕಲಿಕಾ ವಾತಾವರಣ ನಿರ್ಮಿಸುವುದು ಹಾಗೂ ಎಲ್ಲ ರೀತಿಯ ಅಗತ್ಯ ಸೌಕರ್ಯ ಕಲ್ಪಿಸುವುದು ಕುರಿತಂತೆ ಚರ್ಚಿಸಲಾಯಿತು.
ಹೊಸ ಕಟ್ಟಡದ ವಿಶೇಷತೆ ಏನು ?
ಆವರಣದಲ್ಲಿ ಉದ್ಯಾನವನ, ಸುಸಜ್ಜಿತ ಕ್ರೀಡಾಂಗಣ, ಕಾರ್ಪಾರ್ಕಿಂಗ್, ಬೈಕ್ ಪಾರ್ಕಿಂಗ್, ಈಜುಕೊಳ, ಜಿಮ್, ಟೆನಿಸ್ ಕೋರ್ಟ್ ಸೇರಿದಂತೆ ಇನ್ನಿತರೆ ಸೌಕರ್ಯಗಳು, ಸೆಲ್ರೂಮ್, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಕ್ರೀಡಾ ಕೊಠಡಿ, ಸೆಮಿನಾರ್ ಹಾಲ್, ಪ್ರಿನ್ಸಿಪಲ್ ರೂಮ್, ಎಚ್ಒಡಿ ರೂಮ್, ಆಫೀಸ್-ಅಕೌಂಟ್ಸ್, ರಿಕಾರ್ಡ್ ರೂಮ್, ಎಲೆಕ್ಟಾçನಿಕ್ಸ್ ಮತ್ತು ಸರ್ವರ್ ರೂಮ್, ಕ್ಲಾಸ್ರೂಮ್, 500 ಜನರು ಕುಳಿತುಕೊಳ್ಳುವ ಸಭಾಂಗಣ, ಫಿಸಿಕ್ಸ್, ಕೆಮಿಸ್ಟಿç,ಜೂಲಾಜಿ, ಬಾಟನಿ, ಗಣಿತ, ಕಂಪ್ಯೂಟರ್ ಸೇರಿದಂತೆ ವಿವಿಧ ವಿಷಯಗಳ ಲ್ಯಾಬ್ಗಳು ಹೀಗೆ ಹಲವು ಕೊಠಡಿಗಳನ್ನು ಮಹಾವಿದ್ಯಾಲಯದ ಉದ್ದೇಶಿತ ನೂತನ ಕಟ್ಟಡ ಹೊಂದಿರಲಿದೆ.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ.ವೆಂಕಟನಾರಾಯಣ ಎಂ, ಬಸವರಾಜ ತಳಕಲ್, ವೈಜನಾಥ ಸಗರಮಠ, ಸಿಂಡಿಕೇಟ್ ಮಾಜಿ ಸದಸ್ಯ ಆರ್.ಸಿ.ಪಾಟೀಲ್ ಸೇರಿದಂತೆ ಇನ್ನಿತರರು ಇದ್ದರು.
