ಸಿಂಧನೂರು : ಬಿಜೆಪಿ ಸರ್ಕಾರದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ: ಸಾತಿ ಸುಂದರೇಶ ವಾಗ್ದಾಳಿ

Spread the love

ನಮ್ಮ ಸಿಂಧನೂರು, ಮೇ 1
ಸರ್ಕಾರದ ಎನ್‌ಸಿಆರ್‌ಬಿ ವರದಿ ಪ್ರಕಾರವೇ ದೇಶದಲ್ಲಿ ಪ್ರತಿದಿನ 10 ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಹತ್ರಾಸ್, ಉನ್ನಾವೋ, ಕಥುವಾ ಅತ್ಯಾಚಾರ, ಕೊಲೆ ಘಟನೆಗಳಲ್ಲಿ ಬಿಜೆಪಿಗರೇ ಭಾಗಿಯಾಗಿದ್ದು, ಕೆಲ ಪ್ರಕರಣದ ಆರೋಪಿಗಳ ಪರವಾಗಿ ನಾಚಿಗೆಗೆಟ್ಟು ಮೆರವಣಿಗೆ ನಡೆಸಿದ್ದಾರೆ. ರಾಜ್ಯದಲ್ಲಿ ಕಳೆದೊಂದು ವಾರದಿಂದ ಇಡೀ ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆದಿರುವ ಬಿಜೆಪಿ-ಜೆಡಿಎಸ್ ಮೈತ್ರಿ ಲೋಕಸಭಾ ಅಭ್ಯರ್ಥಿಯೊಬ್ಬ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ವಿಡಿಯೋ ಚಿತ್ರೀಕರಿಸಿ ವಿದೇಶಕ್ಕೆ ಪರಾರಿಯಾಗಿರುವುದನ್ನು ಗಮನಿಸಿದರೆ ಬಿಜೆಪಿ ಸರ್ಕಾರದಲ್ಲಿ ಮಹಿಳೆಯರು ಸುರಕ್ಷಿತೆಯಿಲ್ಲ ಎಂಬುದು ಸಾಬೀತಾಗಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಬಿಜೆಪಿಯವರದ್ದು ‘ಭೇಟಿ ಪಡಾವೋ, ಭೇಟಿ ಬಚಾವೋ’ ಕೇವಲ ನಕಲಿ ಘೋಷಣೆಯಾಗಿದೆ. ಅವರ ಅಸಲಿ ವಿಚಾರ ಏನೆಂದರೆ, ಭೇಟಿಯರ ಮೇಲೆ ತಮ್ಮದೇ ಪಕ್ಷದ ಕೆಲವರು ಅತ್ಯಾಚಾರ, ದೌರ್ಜನ್ಯ ನಡೆಸಿದರೆ ಮೋದಿಯವರೂ ಕಿಂಚಿತ್ತೂ ಮಾತನಾಡುವುದಿಲ್ಲ. ಅತ್ಯಾಚಾರಿಗಳನ್ನು ಮಟ್ಟಹಾಕಬೇಕಾದ ಬಿಜೆಪಿ ಅತ್ಯಾಚಾರಿಗಳ ಪರ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಪಾದಿಸಿದರು.
ಗೋರಕ್ಷರಿರುವ ದೇಶವೇ ಆಕಳು ಮಾಂಸ ರಫ್ತಿನಲ್ಲಿ ನಂ.2
ಮಾತೆತ್ತಿದರೆ ಗೋವಿನ ಬಗ್ಗೆ ಮಾತನಾಡುವ ಬಿಜೆಪಿಯವರು ಮತ್ತು ಗೋರಕ್ಷರು, ಇಂತಹ ಗೋರಕ್ಷಕರಿರುವ, ಮೋದಿಯವರ ಆಡಳಿತದಲ್ಲಿರುವ ಭಾರತ ವಿಶ್ವದಲ್ಲೇ ಗೋಮಾಂಸ ರಫ್ತಿನಲ್ಲಿ 2ನೇ ಸ್ಥಾನಲ್ಲಿದೆ. ಮೋದಿಯವರ ರೈತ ವಿರೋಧಿ ನೀತಿಗಳ ಜಾರಿಯಿಂದಾಗಿ ಇಂದು ರೈತರು ಪರಿತಪಿಸುತ್ತಿದ್ದಾರೆ. ಎಂ.ಎಸ್.ಪಿ.ಕಾನೂನುಬದ್ಧಗೊಳಿಸಲು ದೆಹಲಿಯಲ್ಲಿ ಹೋರಾಟ ನಡೆಸಿದ ರೈತರ ಮೇಲೆ ಬಿಜೆಪಿ ಗುಂಡಿನ ಮಳೆಗರಿಯುವ ಮೂಲಕ 750ಕ್ಕೂ ಹೆಚ್ಚು ರೈತರನ್ನು ಬಲಿ ಪಡೆದಿದೆ. ಸಾವಿರಾರು ರೈತರ ಮೇಲೆ ಪ್ರಕರಣ ದಾಖಲಿಸಿದೆ. ತಾವು ಗುಜರಾತ್ ಪ್ರಧಾನ ಮಂತ್ರಿಯಾಗಿದ್ದಾಗ ಎಂಎಸ್‌ಪಿ ಜಾರಿಗೆ ಹಾಗೂ ಡಾ.ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಕೇಂದ್ರದ ಯುಪಿಎ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿ ಮೋದಿಯವರು ತಾವೇ ಪ್ರಧಾನಿ ಮಂತ್ರಿಯಾದಾಗ ಈ ಬಗ್ಗೆ ರೈತರು ಒತ್ತಾಯಿಸಿದರೂ ಇಲ್ಲಿಯವರೆಗೂ ಈ ಕಾನೂನು ಜಾರಿಗೆ ತಂದಿಲ್ಲ. ಈಗಾಗಲೇ ಕೈಗಾರಿಕಾ ವಲಯವನ್ನು ಅಂಬಾನಿ, ಆದಾನಿಗೆ ಧಾರೆ ಎರೆದಿರುವ ಮೋದಿಯವರು, ಕೃಷಿ ರಂಗವನ್ನು ಕಾರ್ಪೋರೇಟ್ ಧಣಿಗಳಿಗೆ ಒತ್ತೆಹಾಕಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ಬದಲಿಸಿ, ಮನುಸ್ಮೃತಿ ಹೇರುವುದೇ ಬಿಜೆಪಿ ಹುನ್ನಾರ !
ಬಿಜೆಪಿಯ ಸಚಿವರು, ಸಂಸದರು ಈಗಾಗಲೇ ಹಲವು ಬಾರಿ ಸಂವಿಧಾನ ಬದಲಾಯಿಸುವ ಮಾತನಾಡಿದ್ದಾರೆ. ಸಂವಿಧಾನವನ್ನು ಬದಲಿಸಿ ಮನಸ್ಮೃತಿ ಆಧರಿತ ವರ್ಣಾಶ್ರಮ ಪದ್ಧತಿಯನ್ನು ಈ ದೇಶದ ಜನರ ಮೇಲೆ ಹೇರುವುದೇ ಬಿಜೆಪಿಯ ಕಾರ್ಯಸೂಚಿಯಾಗಿದೆ. ಹಾಗಾಗಿ ರೈತ, ಕಾರ್ಮಿಕ, ಮಹಿಳಾ ಹಾಗೂ ಯುವಜನ ವಿರೋಧಿ ಕೇಂದ್ರದ ಬಿಜೆಪಿ ಸರ್ಕಾರವನ್ನು ಈ ಲೋಕಸಭಾ ಚುನಾವಣೆಯಲ್ಲಿ ನಿರ್ಣಾಯಕವಾಗಿ ಸೋಲಿಸುವ ಮೂಲಕ ಪ್ರತಿಯೊಬ್ಬರು ದೇಶದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಾಷುಮಿಯಾ ಪ್ರಾಸ್ತಾವಿಕ ಮಾತನಾಡಿದರು. ಡಿ.ಎಚ್.ಕಂಬಳಿ ನಿರ್ವಹಿಸಿದರು. ವೆಂಕನಗೌಡ ಗದ್ರಟಗಿ, ಎಐಕೆಎಸ್‌ನ ಚಂದ್ರಶೇಖರ ಕ್ಯಾತ್ನಟ್ಟಿ, ಜಗದೀಶ್, ಅಂಗನವಾಡಿ ಕಾರ್ಯಕರ್ತೆಯರ ಫೆಡರೇಶನ್‌ನ ಪದಾಧಿಕಾರಿಗಳು, ಕಾರ್ಯಕರ್ತೆಯರು ಇದ್ದರು.


Spread the love

Leave a Reply

Your email address will not be published. Required fields are marked *