ನಮ್ಮ ಸಿಂಧನೂರು, ಏಪ್ರಿಲ್ 4
ನಗರದ ಗಂಗಾವತಿ ಮಾರ್ಗದ ರಸ್ತೆ, ಕುಷ್ಟಗಿ ಮಾರ್ಗದ ರಸ್ತೆ, ರಾಯಚೂರು ಮಾರ್ಗದ ರಸ್ತೆಯ ಎರಡೂ ಬದಿಗಳಲ್ಲಿರುವ ನೂರಾರು ಗಿಡಗಳು ಸುಡು ಬಿಸಿಲಿಗೂ ಜಗ್ಗದೇ ಬಿರು ಬೇಸಿಗೆಯಲ್ಲೂ ಸಾರ್ವಜನಿಕರಿಗೆ ನೆರಳಿನ ದಾಸೋಹ ಮಾಡುತ್ತಿವೆ. ಸ್ವಯಂ ಸೇವಕರು, ಕೆಲ ಸಂಸ್ಥೆಗಳು ಹಾಗೂ ನಗರಸಭೆಯ ಕಾಳಜಿಯಿಂದಾಗಿ ಬೆಳೆದು ನಿಂತಿರುವ ಗಿಡಗಳು ಇಂದು ಸಾರ್ವಜನಿಕರಿಗೆ ಆಸರೆಯಾಗಿವೆ.
ಕೆಲ ವರ್ಷಗಳ ಹಿಂದೆ ಸ್ವಯಂ ಸೇವಾ ಸಂಸ್ಥೆಗಳ ಸ್ವಯಂ ಸೇವಕರ ಆಸಕ್ತಿ, ನಗರಸಭೆಯ ಸಹಕಾರದೊಂದಿಗೆ ನೆಟ್ಟ ಗಿಡಗಳು ಇಂದು ನೆರಳು ನೀಡುವ ಹಂತಕ್ಕೆ ಬೆಳೆದಿದ್ದು, ಬೀದಿ ಬದಿ ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ಆಸರೆ ಒದಗಿಸಿವೆ; ಜೊತೆಗೆ ನಗರದ ಅಂದವನ್ನು ಹೆಚ್ಚಿಸಿವೆ. ಮಳೆ-ಗಾಳಿಗೆ ಬೆರಳೆಣಿಕೆ ಗಿಡಗಳು ಮುರಿದು ಹೋದರೂ ಬಹಳಷ್ಟು ಗಿಡಗಳು ಉಳಿದುಕೊಂಡಿವೆ.
ಸಿಂಧನೂರು ಎಂದರೆ ಧೂಳ, ಗಿಡ-ಮರಗಳಿಲ್ಲದ ನಗರ ಎನ್ನುವ ಸ್ಥಿತಿ ಇತ್ತು. ಆದರೆ ರಸ್ತೆಯ ಇಕ್ಕೆಲಗಳಲ್ಲಿ ಸಸಿಗಳನ್ನು ನೆಟ್ಟು, ಪೋಷಣೆ ಮಾಡಿದ ಫಲವಾಗಿ ಇಂದು ಒಂದಿಷ್ಟು ನೆರಳು ಕಾಣುವಂತಾಗಿದೆ. ಇದೇ ರೀತಿ ಪ್ರತಿ ಬಡಾವಣೆಯ ಸಾರ್ವಜನಿಕ ರಸ್ತೆಗಳಲ್ಲಿ ಸಸಿಗಳನ್ನು ನೆಟ್ಟು, ಈಗಾಗಲೇ ಸಾರ್ವಜನಿಕ ಉದ್ಯಾನವನಕ್ಕೆ ನಿಯೋಜಿಸಿದ ಜಾಗಗಳಲ್ಲಿ ಮತ್ತು ಹೊಸ ಲೇಔಟ್ಗಳಲ್ಲಿ ಪಾರ್ಕ್ಗಳನ್ನು ನಿರ್ಮಿಸಿ ಪರಿಸರ ಪೋಷಿಸಲು ಸ್ಥಳೀಯ ಸಂಸ್ಥೆಗಳು, ಚುನಾಯಿತ ಜನಪ್ರತಿನಿಧಿಗಳು, ಸಂಬAಧಿಸಿದ ಇಲಾಖೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬರಬೇಕೆನ್ನುವುದು ನಗರದ ನಿವಾಸಿಗಳ ಒತ್ತಾಸೆಯಾಗಿದೆ.