ಲೋಕಲ್ ನ್ಯೂಸ್ : ಬಸವರಾಜ ಹಸಮಕಲ್
ನಮ್ಮ ಸಿಂಧನೂರು, ಏಪ್ರಿಲ್ 30, 2026
ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರ ನೇತೃತ್ವದಲ್ಲಿ ಬಸನಗೌಡ ಫೌಂಡೇಶನ್ ವತಿಯಿಂದ ಮೇ 3, 2026 ಭಾನುವಾರದಂದು ನಗರದ ಕುಷ್ಟಗಿ ಮಾರ್ಗದ ರಸ್ತೆಯಲ್ಲಿರುವ ತಾಲ್ಲೂಕು ಕ್ರೀಡಾಂಗಣದಲ್ಲಿ ಉಚಿತ ಸಾಮೂಹಿಕ ವಿವಾಹ ಹಾಗೂ ಮಾತೆಯರಿಗೆ ಹುಡಿ ತುಂಬುವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬೆಂಗಳೂರು ಮಾದರಿಯಲ್ಲಿ ಬೃಹತ್ ಪೆಂಡಾಲು ಹಾಕಲಾಗಿದ್ದು, ಸಾರ್ವಜನಿಕ ಗಮನ ಸೆಳೆದಿದೆ.
ಊಟ, ಕುಡಿಯುವ ನೀರು, ಟ್ರಾಫಿಕ್ ನಿಯಂತ್ರಣಕ್ಕೆ ವ್ಯವಸ್ಥೆ
ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನೆಲೆಯಲ್ಲಿ ಬೃಹತ್ ಪೆಂಡಾಲು ಹಾಕಲಾಗಿದ್ದು, ಮುಖ್ಯ ವೇದಿಕೆ ಪಕ್ಕದಲ್ಲಿ ಊಟಕ್ಕೆ ಪ್ರತ್ಯೇಕ ಪೆಂಡಾಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಕ್ರೀಡಾಂಗಣದ ಗೋಡೆಗೆ ಹೊಂದಿಕೊಂಡು ಮೂರ್ನಾಲ್ಕು ಕಡೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಟ್ರಾಫಿಕ್ ದಟ್ಟಣೆ ನಿಯಂತ್ರಿಸಲು ಕ್ರೀಡಾಂಗಣದ ಹೊರ ಭಾಗದಲ್ಲಿ ಅಲ್ಲಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ.

ಬೃಹತ್ ಪೆಂಡಾಲು, ಫ್ಯಾನಿನ ವ್ಯವಸ್ಥೆ
ಬೇಸಿಗೆಯಲ್ಲಿ ಕುದಿ ಇರುವ ಕಾರಣ ಬೃಹತ್ ಪೆಂಡಾಲಿನಲ್ಲಿ ದೊಡ್ಡದಾದ ಐದಾರು ಫ್ಯಾನುಗಳನ್ನು ಅಳವಡಿಸಲಾಗಿದೆ. ಆಗಮಿಸಿದ ಜನಸ್ತೋಮಕ್ಕೆ ಮಳೆ ಹಾಗೂ ಬಿಸಿಲಿನಿಂದ ಯಾವುದೇ ರೀತಿಯ ಸಮಸ್ಯೆಯಾಗದಂತೆ ಬೃಹತ್ ಪೆಂಡಾಲಿಗೆ ವಾಟರ್ ಪ್ರೂಫ್ ಪ್ಲಾಸ್ಟಿಕ್ ಹೊದಿಕೆಯನ್ನೂ ಹಾಕಲಾಗಿದೆ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಸಚಿವರ ಆಗಮನ
ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಅಂದು ನಗರಕ್ಕೆ ಸಚಿವರ ದಂಡೇ ಆಗಮಿಸಲಿದೆ ಎಂದ ಹೇಳಲಾಗುತ್ತಿದೆ. ಈಗಾಗಲೇ ಆ ಕುರಿತು ನಗರದ ಪ್ರಮುಖ ವೃತ್ತಗಳಲ್ಲಿ ಬ್ಯಾನರ್ಗಳು ರಾರಾಜಿಸುತ್ತಿವೆ. ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಅಂದು ಮಧ್ಯಾಹ್ನ 12 ಗಂಟೆಗೆ ನಗರಕ್ಕೆ ಆಗಮಿಸಲಿದ್ದು, ಮಧ್ಯಾಹ್ನ 3 ಗಂಟೆಯವರೆಗೂ ಇರಲಿದ್ದಾರೆ. ಅಲ್ಲದೇ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್, ಆರ್.ಬಿ.ತಿಮ್ಮಾಪುರ, ಕೆ.ಎಚ್.ಮುನಿಯಪ್ಪ, ಈಶ್ವರ ಖಂಡ್ರೆ, ಎನ್.ಎಸ್.ಭೋಸರಾಜು, ಡಾ.ಶರಣಪ್ರಕಾಶ ಪಾಟೀಲ್, ಶಿವರಾಜ.ಎಸ್.ತಂಗಡಗಿ, ರೆಹಮಾನ್ಖಾನ್ ಸೇರಿದಂತೆ ಹಲವು ಸಚಿವರು, ಸಂಸದರು, ಶಾಸಕರು ಸೇರಿದಂತೆ ಇನ್ನಿತರೆ ಗಣ್ಯರು ಆಗಮಿಸಲಿದ್ದಾರೆಂದು ತಿಳಿದುಬಂದಿದೆ.

ಕಾರ್ಮಿಕರಿಂದ ಭರದ ಕೆಲಸ
ಸಾಮೂಹಿಕ ವಿವಾಹ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿದ್ದು, ಕಾರ್ಮಿಕರು ಭರದಿಂದ ನಿರ್ವಹಿಸುತ್ತಿರುವುದು ಗುರುವಾರ ಬೆಳಿಗ್ಗೆ ಕಂಡುಬಂತು. ಮದುವೆ ಕಾರ್ಯಕ್ರಮ ಹಾಗೂ ಮಾತೆಯರಿಗೆ ಹುಡಿ ತುಂಬುವ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ ಇದೆ ಹೀಗಾಗಿ ಕೆಲಸ ಕಾರ್ಯಗಳು ಚುರುಕಿನಿಂದ ನಡೆಸಲಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.



