ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 16
ನಗರದ ಪಿಡಬ್ಲ್ಯುಡಿ ಕ್ಯಾಂಪ್ನ ಸಂಚಾರಿ ಪೊಲೀಸ್ ಠಾಣೆ ಬಳಿ ನಿರ್ಮಾಣಗೊಂಡಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಯಾವಾಗ ಎಂಬುದು ಸಾರ್ವಜನಿಕರ ಬಹು ದಿನದ ಪ್ರಶ್ನೆಯಾಗಿದೆ. ಈಗಾಗಲೇ ಹಲವು ಕಾರಣಗಳಿಂದಾಗಿ ಆಸ್ಪತ್ರೆ ಸಾರ್ವಜನಿಕ ಸೇವೆಗೆ ದೊರೆಯುವಲ್ಲಿ ಬಹಳ ವಿಳಂಬವಾಗಿದೆ. ಪುನಃ ಹೊಸ ನೆಪಗಳನ್ನು ಹೇಳುತ್ತಿರುವುದು ನಾಗರಿಕರ ಅಸಹನೆಗೆ ಕಾರಣವಾಗಿದೆ.
ಆಸ್ಪತ್ರೆ ನಿರ್ಮಾಣದ ಶೇ.95ರಷ್ಟು ಕೆಲಸ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದ್ದರೂ ಬಾಕಿ ಕೆಲಸಗಳ ಪಟ್ಟಿಯೇ ದೊರೆಯುತ್ತಿದೆ. ನೀರಿನ ಸಂಗ್ರಹಣ ತೊಟ್ಟಿ ನಿರ್ಮಾಣ, ವಿದ್ಯುತ್ ಸಂಪರ್ಕ ಕೆಲಸ ಕೊನೆಯ ಹಂತ, ವಿದ್ಯುತ್ ಪರಿವರ್ತಕ ಅಳವಡಿಸುವಿಕೆ, ಲಿಫ್ಟ್, ಸುಣ್ಣ-ಬಣ್ಣ, ಒಳಾವರಣದ ಕೊಠಡಿಗಳ ಸುಸಜ್ಜಿತಗೊಳಿಸುವುದು ಸೇರಿದಂತೆ ಬಹಳಷ್ಟು ಕೆಲಸ ಕಾರ್ಯಗಳಲ್ಲಿ ಪ್ರಗತಿ ಸಾಧಿಸಲಾಗಿದೆ. ಆದರೂ ಇನ್ನೂ ಹಲವು ಕೆಲಸಗಳು ಬಾಕಿ ಉಳಿದಿವೆ ಎಂದು ತಿಳಿದುಬಂದಿದೆ.
ಬಾಕಿ ಕೆಲಸಗಳು ಏನೇನು ?
ತಾಯಿ ಮತ್ತು ಮಕ್ಕಳ ಚಿಕಿತ್ಸೆ ದೃಷ್ಟಿಯಿಂದ ಅತ್ಯಂತ ಅವಶ್ಯವಾಗಿರುವ ಆಕ್ಸಿಜನ್ ಪ್ಲಾಂಟ್ ಅಳವಡಿಸುವ ಮಹತ್ವದ ಕೆಲಸ ಇನ್ನೂ ಆರಂಭವಾಗಿಲ್ಲ. ಇತ್ತೀಚೆಗೆ ಚೆನ್ನೈ ಅಥವಾ ಹುಬ್ಬಳ್ಳಿ ಮೂಲದ ಕಂಪನಿಯವರು ಆಸ್ಪತ್ರೆಯನ್ನು ವೀಕ್ಷಿಸಿ ಆಕ್ಸಿಜನ್ ಅಳವಡಿಸುವುದಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ಹೋಗಿದ್ದಾರೆಂದು ಹೇಳಲಾಗುತ್ತಿದ್ದು, ಇದಕ್ಕೆ ಮತ್ತೊಮ್ಮೆ ಟೆಂಡರ್ ಕರೆಯಬೇಕು ಎಂದು ಹೇಳಲಾಗುತ್ತಿದೆ. ಇನ್ನೂ ಆಸ್ಪತ್ರೆಯ ಸುತ್ತಲೂ ಕಾಂಪೌಂಡ್ ನಿರ್ಮಿಸಿಲ್ಲ, ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಕೈಗೊಂಡಿಲ್ಲ, ಈ ಎಲ್ಲ ಕೆಲಸಗಳಿಗೆ ಪ್ರತ್ಯೇಕ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕಿದೆ ಎಂಬ ಮಾಹಿತಿ ಇದ್ದು, ಸಂಬಂಧಿಸಿದ ಇಲಾಖೆಯವರೇ ಈ ಬಗ್ಗೆ ಖಚಿತಪಡಿಸಬೇಕಿದೆ. ಈ ಎಲ್ಲ ಕೆಲಸಗಳು ಈ ವರ್ಷವೇ ಮುಗಿಯುತ್ತವೆಯೋ ? ಇಲ್ಲಾ ಮುಂದಿನ ವರ್ಷದವರೆಗೆ ದೂಡುತ್ತ ಬರಲಾಗುವುದೋ ಎಂದು ಸಂಘಟನೆಯ ಮುಖಂಡರೊಬ್ಬರು ಅನುಮಾನ ವ್ಯಕ್ತಪಡಿಸುತ್ತಾರೆ.

60 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ
2020, ಏಪ್ರಿಲ್ನಲ್ಲಿ ಸರ್ಕಾರ ತಾಲೂಕಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರು ಮಾಡಿತ್ತು. ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ 11 ಕೋಟಿ ರೂಪಾಯಿ ಮಂಜೂರಾಗಿತ್ತು. 60 ಹಾಸಿಗೆಯ ಸೌಲಭ್ಯವುಳ್ಳ ಆಸ್ಪತ್ರೆ ಇದಾಗಿದ್ದು, 3 ಪ್ರಸೂತಿ ತಜ್ಞರು ಸೇರಿದಂತೆ ಆರೋಗ್ಯ ಸಿಬ್ಬಂದಿಯ ಅವಶ್ಯಕತೆ ಇದೆ. ಆಸ್ಪತ್ರೆ ಮಂಜೂರಾಗಿ 5 ವರ್ಷಗಳು ಗತಿಸಿದರೂ ಇನ್ನೂ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದೇ ಇರುವುದು ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಿದೆ.
‘ಆಸ್ಪತ್ರೆ ಆರಂಭವಾದರೆ ಒತ್ತಡ ತಗ್ಗಲಿದೆ’
ನಗರದ 100 ಹಾಸಿಗೆ ಸಾಮರ್ಥ್ಯದ ತಾಲೂಕಾ ಸಾರ್ವಜನಿಕ ಆಸ್ಪತ್ರೆ ಯಾವಾಗಲೂ ಸಾರ್ವಜನಿಕರು ಹಾಗೂ ತಪಾಸಣೆಗೆ ಬರುವವರಿಂದ ಗಿಜಗುಡುತ್ತದೆ. ಹಲವು ವೈದ್ಯರು ಇಲ್ಲಿರುವುದರಿಂದ ದಿನವೂ ರೋಗಿಗಳ ಸಂಖ್ಯೆ ಜಾಸ್ತಿ. ಈ ನಡುವೆ ಹೆರಿಗೆ, ಬಾಣಂತಿಯರಿಗೆ ಚಿಕಿತ್ಸೆ, ಗರ್ಭಿಣಿಯರಿಗೆ ವಿವಿಧ ತಪಾಸಣೆಗಾಗಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿಯ ಕೊರತೆ, ಆಸ್ಪತ್ರೆ ಕಟ್ಟಡ ಚಿಕ್ಕದಾಗಿರುವುದರಿಂದ ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಪಿಡಬ್ಲ್ಯುಡಿ ಕ್ಯಾಂಪ್ನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆರಂಭವಾದರೆ ತಾಲೂಕು ಆಸ್ಪತ್ರೆ ಮೇಲಿನ ಒತ್ತಡ ತಗ್ಗಲಿದ್ದು, ಜನಜಂಗುಳಿಯೂ ಕಡಿಮೆಯಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.