ಲೋಕಲ್ ನ್ಯೂಸ್: ಬಸವರಾಜ ಹಸಮಕಲ್
ನಮ್ಮ ಸಿಂಧನೂರು, ಮಾರ್ಚ್ 15
ನಗರದ ರಾಯಚೂರು ಮಾರ್ಗದ ಹಿರೇಹಳ್ಳದ ಸೇತುವೆ ಮೇಲೆ ಲೋಡ್ ಟೆಸ್ಟಿಂಗ್ಗಾಗಿ ಒಂದು ಬದಿಯ ಸಂಚಾರವನ್ನು ಬಂದ್ ಮಾಡಿರುವುದು ಭಾನುವಾರ ಬೆಳಿಗ್ಗೆ ಕಂಡುಬAತು.
“ಸಿಂಧನೂರು ನಗರದ ಹಿರೇಹಳ್ಳದ ಸೇತುವೆಗೆ ಲೋಡ್ ಟೆಸ್ಟ್ ಮಾಡುವ ಕಾರಣ ಮಾರ್ಗ ಬದಲಾಯಿಸಿರುತ್ತದೆ. ಕಾರಣ ವಾಹನ ಸವಾರರು ಸಹಕರಿಸಬೇಕೆಂದು ವಿನಂತಿ. ನಿಧಾನವಾಗಿ ಚಲಿಸಿ” ಎಂದು ಬ್ಯಾನರ್ ಅಳವಡಿಸಿ ವಾಹನ ಸವಾರರಿಗೆ ಸೂಚಿಸಲಾಗಿದೆ.
ಸೇತುವೆ ಸಾಮರ್ಥ್ಯ, ಸುರಕ್ಷತೆಗಾಗಿ ಟೆಸ್ಟಿಂಗ್ ?
ಹಿರೇಹಳ್ಳದ ಸೇತುವೆಯ ಮೂಲಕ ದಿನವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ಹಿಂದೆ ಇದ್ದ ಸೇತುವೆ ವಿಸ್ತರಿಸಿದ ನಂತರ ಗುತ್ತಿಗೆದಾರರು ಅಂದಾಜು ಪತ್ರಿಕೆಯ ನಿಯಮಗಳ ಅನ್ವಯ ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ ಎಂಬ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಈ ನಡುವೆ ಜನಪ್ರತಿಧಿಯೊಬ್ಬರು ಈ ಸೇತುವೆಯ ಬಗ್ಗೆ ಸದನದಲ್ಲಿಯೂ ಧ್ವನಿ ಎತ್ತಿ ಗಮನ ಸೆಳೆದಿದ್ದನ್ನು ಸ್ಮರಿಸಬಹುದು. ಸಾರ್ವಜನಿಕ ಸಂಚಾರ ಹಿತದೃಷ್ಟಿಯಿಂದ ಮತ್ತು ಸೇತುವೆಯ ಭದ್ರತೆ, ಸುರಕ್ಷತೆ ಹಾಗೂ ಸಾಮರ್ಥ್ಯವನ್ನು ಪತ್ತೆಹಚ್ಚಲು ಲೋಡ್ ಟೆಸ್ಟಿಂಗ್ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಅರೆಬರೆ ಕೆಲಸ, ಸಾರ್ವಜನಿಕರ ಆರೋಪ
ಹಳ್ಳದ ಸೇತುವೆ ನಿರ್ಮಾಣದ ನಂತರ ಮೇಲ್ಭಾಗದಲ್ಲಿ ಸಮತಟ್ಟಾಗಿ ಡಾಂಬರೀಕರಣ ಇಲ್ಲವೇ, ಸಿಸಿ ರಸ್ತೆ ನಿರ್ಮಿಸದ ಕಾರಣ ಸೇತುವೆಯ ನಡುವೆ ಅಲ್ಲಲ್ಲಿ ಕುಳಿಗಳು ಹಾಗೆಯೇ ಉಳಿದಿವೆ. ಇನ್ನೂ ಒಂದೆಡೆ ತಗ್ಗು-ದಿನ್ನೆ ಕಂಡುಬರುತ್ತದೆ. ಮಳೆ ಬಂದಾಗ ಸೇತುವೆಯ ಮೇಲೆ ನೀರು ನಿಲ್ಲುವುದು ಸಾಮಾನ್ಯವಾಗಿದೆ. ಹೊಸ ಸೇತುವೆ ಪ್ರಯಾಣಿಕರು ಮತ್ತು ಸಾರ್ವಜನಿಕರನ್ನು ಗಮನ ಸೆಳೆಯಬೇಕಾಗಿತ್ತು, ಆದರೆ ಅಸಮಾಧಾನ ಹೆಚ್ಚಿಸಿದೆ. ಇದು ಗುತ್ತಿಗೆದಾರರು ಹಾಗೂ ಮೇಲ್ವಿಚಾರಣೆ ನಡೆಸಿದ ಅಧಿಕಾರಿಗಳು ಹೊಣೆಗೇಡಿತನಕ್ಕೆ ಸಾಕ್ಷಿಯಾಗಿದೆ. ಇದರಿಂದ ಸೇತುವೆಯ ಸುರಕ್ಷತೆ ಮತ್ತು ಭದ್ರತೆಗೆ ಹಾನಿಯಾಗುವ ಸಂಭವ ಇದೆ ಎಂದು ಸಂಘಟನೆಯ ಮುಖಂಡರೊಬ್ಬರು ದೂರುತ್ತಾರೆ.

