ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 19
ತಾಲೂಕಿನ ರೈತ ಕುಟುಂಬಗಳು ಹೊಲದಲ್ಲಿ ಭೂತಾಯಿಗೆ ಬೆಳಿಗ್ಗೆಯೇ ಪೂಜೆ ಸಲ್ಲಿಸಿ, ಸಿಹಿ ಊಟ ಸವಿದು ಎಳ್ಳು ಅಮವಾಸ್ಯೆಯನ್ನು ಸಂಭ್ರಮಿಸಿದರು. ಸಜ್ಜೆ ರೊಟ್ಟಿ, ಎಳ್ಳು ಹೋಳಿಗೆ, ಸೇಂಗಾ ಹೋಬಳಿ, ತರಹೇವಾರಿ ಖಾದ್ಯಗಳ ಬುತ್ತಿ ಕಟ್ಟಿಕೊಂಡು ಗುಂಪು ಗುಂಪಾಗಿ ರೈತ ಕುಟುಂಬಗಳು ಹೊಲದತ್ತ ಧಾವಿಸುತ್ತಿರುವುದು ಶುಕ್ರವಾರ ಕಂಡುಬಂತು.
ಎಳ್ಳು ಅಮವಾಸ್ಯೆಯ ದಿನದಂದು ರೈತ ಕುಟುಂಬಗಳು ಎಳ್ಳು ಹೋಳಿಗೆ, ಎಣ್ಣೆ ಬದನೆಕಾಯಿ, ಕೆಂಪು ಚಟ್ನಿ, ಪಲ್ಲೆ, ಶೇಂಗಾ ಹೋಳಿಗೆ, ಸಜ್ಜಿ ರೊಟ್ಟಿ, ಜೋಳದ ಖಡಕ್ ರೊಟ್ಟಿ, ಕಾಳು ಪಲ್ಯ ಹಲವು ಬಗೆಯ ಚಟ್ನಿ, ಮೊಸರು ಹೀಗೆ ಬಗೆ ಬಗೆಯ ಭಕ್ಷ್ಯಗಳನ್ನು ತಯಾರಿಸಿ ಕುಟುಂಬ ಸದಸ್ಯರು, ಎತ್ತಿ ಬಂಡಿ, ಟಂಟಂ ಇಲ್ಲವೇ ಟ್ರಾಕ್ಟರ್ಗಳಲ್ಲಿ ಮನೆಯ ಸದಸ್ಯರು, ನೆರೆ-ಹೊರೆಯವರೊಂದಿಗೆ ತಮ್ಮ ತಮ್ಮ ಜಮೀನುಗಳಿಗೆ ಹೋಗಿ ಪೂಜೆ ಸಲ್ಲಿಸಿ ಬೆಳೆಯ ನಡುವೆ ಚರಗ ಚೆಲ್ಲಿ ಊಟ ಮಾಡುವುದು ವಾಡಿಕೆಯಾಗಿದೆ. ಎಂದಿನಂತೆ ತಾಲೂಕಿನ ಒಳಬಳ್ಳಾರಿ, ಗಿಣಿವಾರ, ಬಾದರ್ಲಿ, ಗೋಮರ್ಸಿ, ಬೆಳಗುರ್ಕಿ, ಹಿರೇಬೇರಿಗಿ, ಚಿಕ್ಕಭೇರಿಗಿ ಸೇರಿದಂತೆ ಒಣ ಬೇಸಾಯ ಅವಲಂಬಿತ ಗ್ರಾಮೀಣ ಪ್ರದೇಶದಲ್ಲಿ ಚರಗ ಚೆಲ್ಲುವ ಸಂಭ್ರಮ ಮನೆ ಮಾಡಿತ್ತು.

