ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 3
ಅಮೆರಿಕಾ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಸನ್ನಿವೇಶದಿಂದಾಗಿ, ಖ್ಯಾತ ಮಕ್ಕಳ ತಜ್ಞ ಹಾಗೂ ನಗರದ ಸಹನಾ ಆಸ್ಪತ್ರೆಯ ಡಾ.ಶಿವರಾಜ ಪಾಟೀಲ್ ಅವರು ಕಳೆದ 8 ದಿನಗಳಿಂದ ದುಬೈನಲ್ಲಿ ಸಿಲುಕಿದ್ದು, ಸದಾ ಜನ ನಿಬಿಡತೆಯಿಂದ ಕೂಡಿರುತ್ತಿದ್ದ, ಆಸ್ಪತ್ರೆಯ ಮುಂಭಾಗದಲ್ಲಿ ಮಂಗಳವಾರ ಬೆಳಿಗ್ಗೆ ಬಿಕೋ ವಾತಾವರಣ ಕಂಡುಬಂತು.
ಮಾಧ್ಯಮವೊಂದರ ಪ್ರಶಸ್ತಿಗೆ ಭಾಜನರಾಗಿದ್ದ ಅವರು, ಪ್ರಶಸ್ತಿ ಸ್ವೀಕರಿಸಲು ಪತ್ನಿ ಸಮೇತ ಇತ್ತೀಚಿಗೆ ದುಬೈಗೆ ತೆರಳಿದ್ದರು. ಆದರೆ ಏಕಾಏಕಿ ಅಮೆರಿಕಾ, ಇಸ್ರೇಲ್ ಹಾಗೂ ಇರಾನ್ ನಡುವೆ ಬಿಕ್ಕಟ್ಟು ಉಂಟಾಗಿ ಮಿಲಟರಿ ದಾಳಿಗಳು ನಡೆದ ಹಿನ್ನೆಲೆಯಲ್ಲಿ ದುಬೈ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಸಂಪೂರ್ಣ ಬಂದ್ ಆಗಿತ್ತು. ಇದರಿಂದ ಅವರು ಸ್ವದೇಶಕ್ಕೆ ಮರಳು ಸಾಧ್ಯವಾಗಿರಲಿಲ್ಲ. ದುಬೈನ ಹೊಟೆಲ್ವೊಂದರಲ್ಲಿ ರಕ್ಷಣೆ ಪಡೆದುಕೊಂಡಿದ್ದರು.
ವೈದ್ಯರ ವಾಟ್ಸ್ಆ್ಯಪ್ ಸ್ಟೇಟಸ್ ವೈರಲ್
“ಇದೀಗ ಬಂದ ಸುದ್ದಿ 1/03/2026 ಸ್ಥಳೀಯ ಸಮಯ 4.pm. ಸಾಯಂಕಾಲ.. ದುಬೈ ದಿಂದ ಮೊದಲ ವಿಮಾನ ಬುಧವಾರ 3 ಮಾರ್ಚ್ 2026 ಭಾರತೀಯ ಕಾಲಮಾನ ಬೆಳಿಗ್ಗೆ 3 ಘಂಟೆಗೆ ಬೆಂಗಳೂರಿಗೆ ಬಂದು ಇಳಿಯಲಿದ್ದು ನಾವೆಲ್ಲರೂ ಅದೇ ವಿಮಾನದಲ್ಲಿ ಆಗಮಿಸುತ್ತಿದ್ದೇವೆ. ನಾವು ದುಬೈದಲ್ಲಿ ಸಿಲುಕಿಹಾಕಿಕೊಂಡಾಗ ನಮ್ಮ ಸುರಕ್ಷಿತ ಬರುವಿಕೆಗಾಗಿ ಪ್ರಾರ್ಥಿಸಿದ ಎಲ್ಲ ಹಿತೈಷಿಗಳು, ಭಾರತ ರಾಯಭಾರಿ ಕಚೇರಿ, ಕರ್ನಾಟಕ ಸರಕಾರ, ರಾಯಚೂರ್ ಮತ್ತು ಕೊಪ್ಪಳ ಜಿಲ್ಲಾ ರಾಜಕೀಯ ಮುಖಂಡರು, ವಿಶೇಷವಾಗಿ ರಾಯಚೂರು ಸಂಸದರು ಜಿ.ಕುಮಾರ್ ನಾಯಕ ಅವರ ವಿಶೇಷ ಮುತುವರ್ಜಿ ಆನಂದ ಸಂಕೇಶ್ವರ್ ಮತ್ತು ವಿಜಯವಾಣಿ ತಂಡದ ಕಾಳಜಿ, ಆರೈಕೆ, ಪೊಲೀಸ್ ಇಲಾಖೆ ಮತ್ತು ವಿಶೇಷವಾಗಿ ದೃಶ್ಯ ಮತ್ತು ಸುದ್ದಿ ಮಾಧ್ಯಮ ಮಿತ್ರರಿಗೆ ನಮ್ಮ ಹೃದಯ ಪೂರ್ವಕ ನಮನಗಳು,, ಡಾಕ್ಟರ್ ಶಿವರಾಜ್. ಜ್ಯೋತಿ. ಸಹನಾ ಮಕ್ಕಳ ಆಸ್ಪತ್ರೆ. ಸಹನಾ ಮಾಂಟೇಸರಿ ಶಾಲೆ. ಸಿಂಧನೂರ್” ಎಂದು ಡಾ.ಶಿವರಾಜ ಪಾಟೀಲ್ ಅವರು ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮರುಗಿದ ಪಾಲಕರು, ಶೀಘ್ರ ಆಸ್ಪತ್ರೆಗೆ ಬರವಂತಾಗಲಿ ಎಂದ ಹಿತೈಷಿಗಳು
“ನಮ್ಮ ಮಕ್ಳಿಗೆ ಇಲ್ಲೆ ತೋರಸ್ತಿದ್ವಿರಿ. ಶಿವರಾಜ ಡಾಕ್ಟುç ಬೇಸು ನೋಡ್ತಿದ್ರು. ಬ್ಯಾರೇ ದೇಸಕ್ಕ ಹೋದರೂ, ವಾರ ಆತುಆಪತ್ನಾö್ಯಗ ಸಿಕ್ಕಂದರಂತಾ ಕೇಳಿ ಮನಸಿಗೆ ಬ್ಯಾಸ್ರ ಆಗೇತಿ. ಪುಣ್ಯಾತ್ಮ ಜಲ್ದಿ ದೇಶಕ್ಕ ಬರ್ಲಿ” ಎಂದು ಮಂಗಳವಾರ ಮಗುವಿಗೆ ಚಿಕಿತ್ಸೆ ಕೊಡಿಸಲು ಬಂದಿದ್ದ ಮಹಿಳೆಯೊಬ್ಬರು ಮರುಗಿದರು. “ಡಾ.ಶಿವರಾಜ ಅವರು ಜನಾನುರಾಗಿ ವೈದ್ಯರಾಗಿ ಕೆಲಸ ಮಾಡಿದ್ದಾರೆ, ಹಾಗಾಗಿ ಅವರು ಆದಷ್ಟು ಬೇಗ ಸ್ವದೇಶಕ್ಕೆ ಮರಳಿ ಸೇವೆ ನೀಡುವಂತಾಗಲಿ” ಎಂದು ಹಿತೈಷಿಗಳು ಹಾರೈಸಿದ್ದಾರೆ.

