ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 18
“ದಸರಾದಲ್ಲಿ ಚಾಮುಂಡೇಶ್ವರಿಗೆ ಕೇವಲ ಸನಾತನ ಧರ್ಮದವರು ಹೂ ಹಾಕಬೇಕು, ಸಾಮಾನ್ಯ ದಲಿತ ಮಹಿಳೆಗೆ ಸಹ ಹಾಕಲು ಅಧಿಕಾರ ಇಲ್ಲ” ಎಂದು ಜಾತಿವಾದಿ, ಸಂವಿಧಾನ ವಿರೋಧಿ ಹಾಗೂ ಜನ ವಿರೋಧಿ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಯತ್ನಾಳ್ ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕೆಂದು ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯ ರಾಜ್ಯ ಮುಖಂಡ, ಎಂ. ಗಂಗಾಧರ್ ಹಾಗೂ ಜನಪರ ಕವಿ ಪ್ರಶಾಂತ್ ದಾನಪ್ಪ ಮಸ್ಕಿ ಆಗ್ರಹಿಸಿದ್ದಾರೆ.
ಈ ಕುರಿತು ಗುರುವಾರ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಇಂತಹ ವಿಷಕಾರಿ, ಜಾತಿವಾದಿ ಮನಸ್ಥಿತಿ ಇಟ್ಟುಕೊಂಡವರೆಲ್ಲಾ “ಹಿಂದೂ ನಾವೆಲ್ಲಾ ಒಂದು” ಎಂದು ನಾಟಕ ಮಾಡುತ್ತ ಜನರನ್ನ ಮೋಸ ಮಾಡುತ್ತಿದ್ದಾರೆ. ಬಸವಣ್ಣನವರ ಹೆಸರು ಹೇಳುತ್ತಲೇ ಜಾತಿವ್ಯಾದಿ ಮನಸ್ಥಿತಿಯ ಇಂಥವರು ಸಂವಿಧಾನ ಕಾರಣದಿಂದ ವಿಧಾನಸೌಧ, ಪಾರ್ಲಿಮೆಂಟ್ಗೆ ಹೋಗಿ, ಈಗ ಬಹಿರಂಗವಾಗಿ ಜಾತಿ ವಿಷಕಾರುತ್ತಿದ್ದಾರೆ. ಬಸವಣ್ಣನವರ ಕಲ್ಯಾಣ ಕರ್ನಾಟಕಕ್ಕೆ, ಅವರು ಕಂಡ ಆಶಯಕ್ಕೆ ಯತ್ನಾಳ್ ಮಾರಕವಷ್ಟೇ ಅಲ್ಲ ಕಪ್ಪುಚುಕ್ಕೆಯಾಗಿದ್ದಾರೆ. ಕನಿಷ್ಠ ಬಸವಣ್ಣನವರು ನಡೆದಾಡಿದ, ಮಾನವತೆ ಬಿತ್ತಿದ ಮಣ್ಣಲ್ಲಿ ಹುಟ್ಟಿದ್ದಕ್ಕಾಗಿ ಆದ್ರೂ ಮನಸಲ್ಲಿರೋ ಜಾತಿ ಹೊಲಸನ್ನ ಸ್ವಚ್ಚ ಮಾಡಿಕೊಳ್ಳಿ. ಬರೀ ನಿಮ್ಮ ಎಲ್ಲಾ ಮಾತುಗಳಿಗೆ ಜನರು ಬೇರೆ ಬೇರೆ ಅನಿವಾರ್ಯತೆ ಕಾರಣಕ್ಕೆ ಸಿಳ್ಳೆ, ಚಪ್ಪಾಳೆ ಹೊಡೆಯುತ್ತಾರೆಂದು, ಜಾತಿವಾದವನ್ನು, ಮನುವಾದವನ್ನು ಹೇರಲು ಹೋದರೆ ಪ್ರಜ್ಞಾವಂತ ಜನರು ಸುಮ್ಮನಿರುವುದಿಲ್ಲ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
