ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 26
ಜೆಡಿಎಸ್ನಿಂದ ‘ಜನರೊಂದಿಗೆ ಜನತಾದಳ’ ಪಕ್ಷದ ಪ್ರಚಾರಾಂದೋಲನ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರು ತೆರೆದ ವಾಹನದಲ್ಲಿ ಗುರುವಾರ ಬೃಹತ್ ರೋಡ್ ಶೋ ನಡೆಸಿದರು.
ರೋಡ್ಶೋ ಹಿನ್ನೆಲೆಯಲ್ಲಿ ಟ್ರಾö್ಯಕ್ಟರ್ ರ್ಯಾಲಿ, ಬೈಕ್ ರ್ಯಾಲಿ ನಡೆಯಿತು. ಸ್ಥಳೀಯರು ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ರೋಡ್ ಶೋನಲ್ಲಿ ಜೆಡಿಎಸ್ ಪರ ಘೋಷಣೆಗಳು ಮೊಳಗಿದವು. ಗಂಗಾವತಿ ಮಾರ್ಗದ ಯಲಿಮಂಚಾಲಿ ವಾಸುದೇವರಾವ್ ಕಲ್ಯಾಣಮಂಟಪದವರೆಗೂ ರೋಡ್ ಶೋ ನಡೆಯಿತು. ರೋಡ್ ಶೋನಲ್ಲಿ ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ್ ನಾಯ್ಕ್ ಸೇರಿದಂತೆ ಇನ್ನಿತರೆ ಮುಖಂಡರು ಇದ್ದರು.
‘ಜೆಡಿಎಸ್ ರೈತಪರ ಪಕ್ಷ’: ನಿಖಿಲ್ ಕುಮಾರಸ್ವಾಮಿ
ರೋಡ್ ಶೋ ಗಾಂಧಿಸರ್ಕಲ್ ಬಳಿ ಬಂದಾಗ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, “ಜೆಡಿಎಸ್ ಪಕ್ಷ ರೈತಪರ ಪಕ್ಷವಾಗಿದ್ದು, ರೈತರ ಬಗ್ಗೆ ಬದ್ಧತೆ ಹಾಗೂ ಕಾಳಜಿಯನ್ನು ಹೊಂದಿದೆ. ಜೆಡಿಎಸ್ ಸರ್ಕಾರ ಅಧಿಕಾರದಲ್ಲಿದ್ದಾಗ ರೈತಪರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇ ಅದಕ್ಕೆ ಸಾಕ್ಷಿಯಾಗಿದೆ.

‘ವರ್ಷವಾದ್ರೂ ತುಂಗಭದ್ರಾ ಡ್ಯಾಂನ ಒಂದು ಗೇಟ್ ರಿಪೇರಿ ಮಾಡಲು ಆಗಿಲ್ಲ’: ನಾಡಗೌಡ ವಾಗ್ದಾಳಿ
ಕಳೆದ ಬಾರಿ ತುಂಗಭದ್ರಾ ಅಣೆಕಟ್ಟೆಯ 19ನೇ ಗೇಟು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಸಮಸ್ಯೆ ಅನುಭವಿಸಿದರು. ಆಗ ಡ್ಯಾಮಿಗೆ ಭೇಟಿ ಕೊಟ್ಟಿದ್ದ ರಾಜ್ಯದ ಡಿಸಿಎಂ ಅವರು ಒಂದು ವರ್ಷದ ಒಳಗಾಗಿ ಎಲ್ಲ ಗೇಟುಗಳನ್ನು ಬದಲಿಸುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಒಂದೇ ಒಂದು ಗೇಟು ರಿಪೇರಿ ಮಾಡಲು ಈ ಸರ್ಕಾರಕ್ಕೆ ಆಗಿಲ್ಲ. ಅಷ್ಟೇ ಅಲ್ಲದೇ ಈ ಭಾಗದಲ್ಲಿ ರೈತರು ಬೆಳೆದ ಜೋಳವನ್ನು ಖರೀದಿಸಲು ಹಿಂದೇಟು ಹಾಕಿದ ಕಾಂಗ್ರೆಸ್ ಸರ್ಕಾರ ಇನ್ನೂ ಆಡಳಿತದಲ್ಲಿ ಇರಬೇಕಾ ? ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಆಕ್ರೋಶ ವ್ಯಕ್ತಪಡಿಸಿದರು.
ಭಿತ್ತಿಪತ್ರ ಬಿಡುಗಡೆ
ವಾಸುದೇವರಾವ್ ಕಲ್ಯಾಣ ಮಂಟಪದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ನಿಖಿಲ್ಕುಮಾರಸ್ವಾಮಿ ಅವರು ಮಿಸ್ಡ್ ಕಾಲ್ ಸದಸ್ಯತ್ವ ಆಂದೋಲನದ ಭಿತ್ತಿಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಹಗರಿಹೊಮ್ಮನಹಳ್ಳಿ ಶಾಸಕ ನೇಮಿರಾಜ್ ನಾಯ್ಕ, ಜೆಡಿಎಸ್ ಮುಖಂಡರಾದ ಸಿ.ವಿ.ಚಂದ್ರಶೇಖರ ಕೊಪ್ಪಳ, ಸಿದ್ದುಬಂಡಿ ಲಿಂಗಸುಗೂರು, ನಗರಸಭೆ ಸದಸ್ಯ ಚಂದ್ರಶೇಖರ ಮೈಲಾರ ಸೇರಿದಂತೆ ರಾಜ್ಯ ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
