ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 27
ತಾಲೂಕು ಶೈಕ್ಷಣಿಕವಾಗಿ ಪ್ರಗತಿಯ ಹಾದಿಯಲ್ಲಿದ್ದು, ಕ್ರೀಡಾದೃಷ್ಟಿಯಿಂದ ಕ್ರೀಡಾಶಾಲೆ ಅವಶ್ಯಕವಿತ್ತು. ಈ ನಿಟ್ಟಿನಲ್ಲಿ ನೂತನವಾಗಿ ಐಕಾನ್ ಸ್ಫೋರ್ಟ್ಸ್ ಅಕಾಡೆಮಿ ಆರಂಭಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಈ ಅಕಾಡೆಮಿಯಿಂದ ಪ್ರತಿಭಾವಂತ ಕ್ರೀಡಾಪಟುಗಳು ಹೊರಹೊಮ್ಮಲಿ ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಆಶಿಸಿದರು.
ನಗರದ ರಾಯಚೂರು ಮಾರ್ಗದ ರಸ್ತೆಯಲ್ಲಿರುವ ಮುಚ್ಚಳಕ್ಯಾಂಪ್ನ ಐಕಾನ್ ಸ್ಕೂಲ್ ಇಂಟರ್ ನ್ಯಾಶನಲ್ನ ಸ್ಫೋರ್ಟ್ಸ್ ಅಕಾಡೆಮಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ, ಅಕಾಡೆಮಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಕಾಡೆಮಿಯವರು ನಗರದ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಪಾಲಕರ ಮನಸ್ಥಿತಿಯನ್ನು ಅರ್ಥೈಸಿಕೊಂಡು ವಿವಿಧ ರೀತಿಯ ಕ್ರೀಡಾ ತರಬೇತಿ ನೀಡುವ ಮೂಲಕ ಉತ್ತಮ ಸಂಸ್ಥೆಯಾಗಿ ರೂಪುಗೊಳ್ಳಲಿ, ಈ ದಿಸೆಯಲ್ಲಿ ವಿವಿಧ ಶಾಲೆಗಳನ್ನು ಸಂಪರ್ಕಿಸಿದರೆ, ಕ್ರೀಡಾಸಕ್ತ ವಿದ್ಯಾರ್ತಿಗಳ ನೋಂದಣಿಗೆ ಅನುಕೂಲವಾಗಬಹುದು ಎಂದು ಹೇಳಿದರು.
ಅಕಾಡೆಮಿ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಲಿ: ಕೆ.ಕರಿಯಪ್ಪ
ಕ್ರೀಡಾಸಕ್ತಿ ಬೆಳೆಸುವ ಸದುದ್ದೇಶದಿಂದ ಪ್ರಾರಂಭಿಸಿರುವ ಐಕಾನ್ ಸ್ಫೋರ್ಟ್ಸ್ ಅಕಾಡೆಮಿಯು ಬರುವ ದಿನಗಳಲ್ಲಿ ಕ್ರೀಡಾ ತರಬೇತಿ ಕ್ಷೇತ್ರದಲ್ಲಿ ಹೆಸರು ಮಾಡಲಿ. ಬಹಳಷ್ಟು ವಿದ್ಯಾರ್ಥಿ, ಯುವಜನರಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಇರುತ್ತದೆ. ಆದರೆ ತರಬೇತಿ ಕೊರತೆಯಿಂದ ಪ್ರತಿಭೆಗೆ ಸೂಕ್ತ ವೇದಿಕೆಯಾಗಲಿ, ಮನ್ನಣೆಯಾಗಲಿ ದೊರೆಯುವುದಿಲ್ಲ. ಅಂತಹ ಸಮಸ್ಯೆಗಳನ್ನು ಈ ಅಕಾಡೆಮಿ ನಿವಾರಿಸಲಿ ಎಂದು ಅವರು ಹೇಳಿದರು. ಅಕಾಡೆಮಿಯ ಅಧ್ಯಕ್ಷರು ಪ್ರಭುರಾಜ ದೇಸಾಯಿ, ಪ್ರಾಚಾರ್ಯ ದೇವರಾಜ ದೇಸಾಯಿ, ಮುಖ್ಯ ತರಬೇತಿದಾರ ಇಜರ್ ಇಜ್ಜು, ಸಹಾಯಕತ ತರಬೇತಿದಾರ ತಿಮೋತಿ ಸೇರಿದಂತೆ ಇನ್ನಿತರರು ಇದ್ದರು.

ನಾಡಗೌಡ ಬೌಲಿಂಗ್ !, ಕರಿಯಪ್ಪ ಬ್ಯಾಟಿಂಗ್ !!
ಸ್ಫೋರ್ಟ್ಸ್ ಅಕಾಡೆಮಿ ಉದ್ಘಾಟನೆಯ ವೇಳೆ ಕ್ರಿಕೆಟ್ ನೆಟ್ನಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರು ಬೌಲಿಂಗ್ ಮಾಡಿದರೆ, ಕೆ.ಕರಿಯಪ್ಪ ಅವರು ಬ್ಯಾಟಿಂಗ್ ಮಾಡುವ ಮೂಲಕ ಗಮನ ಸೆಳೆದರು.

