ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 3
ಸಿಂಧನೂರು ಹಾಗೂ ಮಸ್ಕಿ ತಾಲೂಕುಗಳ ಬಗರ್ಹುಕುಂ ಸಾಗುವಳಿದಾರರಿಗೆ ಭೂ ಮಂಜೂರಾತಿ ಪಟ್ಟಾ ನೀಡುವುದು ಹಾಗೂ ಆಶ್ರಯ ನಿರಾಶ್ರಿತರಿಗೆ ಹಕ್ಕುಪತ್ರ ಕೊಡುವುದು, ಭತ್ತ, ತೊಗರಿ, ಹತ್ತಿ, ಸೂರ್ಯಕಾಂತಿ, ಜೋಳ, ಸಜ್ಜೆ, ಮೆಕ್ಕೆಜೋಳ, ಕಡಲೆ ಇತರೆ ಕೃಷಿ ಉತ್ಪನ್ನಗಳ ಬೆಳೆ ಕಟಾವಿಗೆ ಒಂದು ತಿಂಗಳು ಮುಂಚೆ ಖರೀದಿ ಕೇಂದ್ರ ತೆರೆಯುವ ನೀತಿ ಜಾರಿ ಮಾಡುವುದು ಪ್ರಮುಖ ಬೇಡಿಕೆಗಳು ಸೇರಿ ಇನ್ನಿತರೆ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಸಿಂಧನೂರಿಗೆ 03-01-2026 ಶನಿವಾರದಂದು ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರೈತ ಸಂಘ (ಎಐಯುಕೆಎಸ್) ವತಿಯಿಂದ ಮನವಿ ಸಲ್ಲಿಸಲಾಯಿತು.
ಬಗರ್ಹುಕುಂ ಸಾಗುವಳಿದಾರರು ಅಕ್ರಮ-ಸಕ್ರಮ ಕಾಯ್ದೆಯಡಿಯಲ್ಲಿ 50,53 ಮತ್ತು 57 ಅರ್ಜಿ ಹಾಕಿದ ಭೂರಹಿತ ಬಡವರಿಗೆ 6 ವರ್ಷ ಕಳೆದರೂ ಭೂ ಮಂಜೂರಾತಿ ದೊರಕಿರುವುದಿಲ್ಲ, ಆದ್ದರಿಂದ ಭೂ ಮಂಜೂರಾತಿ ಬಗರ್ಹುಕುಂ, ಸಾಗುವಳಿದಾರರಿಗೆ ಪಟ್ಟಾ ನೀಡಬೇಕು, ಸಿಂಧನೂರು ನಗರದಲ್ಲಿರುವ ದೋಬಿಗಲ್ಲಿ ಹಾಗೂ ಏಳುರಾಗಿ ಕ್ಯಾಂಪ್ನಲ್ಲಿ ಈಗಾಗಲೇ ವಾಸಿಸು ಬಡ ಜನರಿಗೆ ನಿವೇಶನ ಹಕ್ಕುಪತ್ರ ಕೊಡಬೇಕು, ನಗರದ ಎಲ್ಲಾ ವಾರ್ಡಿನಲ್ಲಿ ಅತಿಕ್ರಮಗೊಂಡಿರುವ ಸಾರ್ವಜನಿಕ ಸಿಎ ಸೈಟ್, ಉದ್ಯಾನಗಳನ್ನು ಮರು ಸ್ವಾಧೀನಪಡಿಸಿಕೊಂಡು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು, ಸರ್ಕಾರ ಪ್ರತಿ ಕ್ವಿಂಟಲ್ ಕೃಷಿ ಉತ್ಪನ್ನಗಳಿಗೆ 800 ರಿಂದ 1500 ರೂಪಾಯಿ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು, ಆಂಧ್ರ, ತೆಲಂಗಾಣ ರಾಜ್ಯಗಳ ಮಾದರಿಯಲ್ಲಿ 50 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಸುವ ತೀರ್ಮಾನ ರಾಜ್ಯ ಸರ್ಕಾರ ಕೈಗೊಳ್ಳಬೇಕು, ಪ್ರತಿಯೊಬ್ಬ ರೈತರಿಂದ 300 ಕ್ವಿಂಟಲ್ ಭತ್ತ 200 ಕ್ವಿಂಟಲ್ ಜೋಳ, 30 ಕ್ವಿಂಟಲ್ ತೊಗರಿ, 100 ಕ್ವಿಂಟಲ್ ಸಜ್ಜೆ, 25 ಕ್ವಿಂಟಲ್ ಕಡಲೆ, 100 ಕ್ವಿಂಟಲ್ ಮೆಕ್ಕೆಜೋಳ ಖರೀದಿಸುವ ತೀರ್ಮಾನ ಮಾಡಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳುಳ್ಳ ಮನವಿಪತ್ರವನ್ನು ಸಿಎಂ ಅವರಿಗೆ ಕೆಆರ್ಎಸ್ ತಾಲೂಕು ಅಧ್ಯಕ್ಷ ರಮೇಶ ಪಾಟೀಲ್ ಬೇರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಚಿಟ್ಟಿಬಾಬು, ಮುಖಂಡರಾದ ಯಲ್ಲಪ್ಪ ಭಜಂತ್ರಿ, ಬಿ.ಎನ್.ಯರದಿಹಾಳ, ಮೇಘರಾಜ ನಾಯಕ ಇದ್ದರು.

