ಸಿಂಧನೂರು : ಕರಡಿ ಸಂಗಣ್ಣನವರ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಬಲ : ಹಂಪನಗೌಡ ಬಾದರ್ಲಿ

Spread the love

ನಮ್ಮ ಸಿಂಧನೂರು, ಎಪ್ರಿಲ್ 27
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸು, ಕಾರ್ಯಕರ್ತರ ಪಡೆ, ಅಭಿಮಾನಿಗಳು ಹಾಗೂ ಹಿತೈಷಿ ವಲಯವನ್ನು ಹೊಂದಿರುವ ಸಂಗಣ್ಣ ಕರಡಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದರಿಂದ ಪಕ್ಷದ ಬಲ ಹೆಚ್ಚಿದ್ದು, ಆನೆಬಲ ಬಂದಂತಾಗಿದೆ ಎಂದು ಹಂಪನಗೌಡ ಬಾದರ್ಲಿ ಹೇಳಿದ್ದಾರೆ. ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಪುನರುಚ್ಚರಿಸಿರುವ ಅವರು, “ ಅಧಿಕಾರ ಸಿಗಲಿ ಬಿಡಲಿ, ಸಿದ್ದರಾಮಯ್ಯ ಅವರೊಂದಿಗೆ ಹೆಜ್ಜೆ ಹಾಕುತ್ತೇನೆ. ಜನಪರ ಕಾಳಜಿಯುಳ್ಳ ಸಿಎಂ ಅವರ ಹಲವು ಅಭಿವೃದ್ಧಿ ಯೋಜನೆಗಳು ನಾಡಿನ ಜನಸಾಮಾನ್ಯರಿಗೆ ಬರಗಾಲದಲ್ಲಿ ನೆರವಾಗಿವೆ. ಇದರಿಂದಾಗಿ ಇಡೀ ರಾಜ್ಯದಾದ್ಯಂತ ಕಾಂಗ್ರೆಸ್ ಅಲೆ ಇದೆ. ಕಾಂಗ್ರೆಸ್ ಕಳೆದ ವಿಧಾನಸಭೆ ಚುನಾವಣೆ ಮುಂಚೆ ನೀಡಿದ್ದ ಪಂಚ ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಮತದಾರರ ವಿಶ್ವಾಸ ಮತ್ತು ನಂಬಿಕೆಯನ್ನು ಗಳಿಸಿದೆ. ಆದರೆ ಬಿಜೆಪಿಯವರು ಸುಳ್ಳು ಭರವಸೆ ಮೂಲಕ ಪುನಃ ಜನರನ್ನು ಮರಳು ಮಾಡಲು ಮುಂದಾಗಿದ್ದು, ರಾಜ್ಯದ ಜನರು ಇವರ ಪೊಳ್ಳು ಭರವಸೆಗಳಿಗೆ ಯಾವತ್ತೂ ಮಾರುಹೋಗುವುದಿಲ್ಲ. ಅವರು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಾರೆಂಬ ಅಚಲ ನಂಬಿಕೆ” ಎಂದು ಹೇಳಿದ್ದಾರೆ.
“ಸಂಸದರಾಗಿ ದಶಕದ ಅನುಭವವಿರುವ ಸಂಗಣ್ಣ ಕರಡಿ ಅವರು ಪಕ್ಷಕ್ಕೆ ಬಂದ ನಂತರ ಅವರೊಂದಿಗೆ ಅವರ ಅಭಿಮಾನಿಗಳು, ಬೆಂಬಲಿಗರು ಸರಣಿಯೋಪಾದಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ಕಾಂಗ್ರೆಸ್‌ಗೆ ಜನ ಬೆಂಬಲ ಹೆಚ್ಚುತ್ತಿದ್ದು, ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರು ೫೦ ಸಾವಿರ ಮತಗಳನ್ನು ಪಡೆದು ವಿಜಯಶಾಲಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಹೇಳಿದ್ದಾರೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *