ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 17
ಕಾಮಗಾರಿ ಪೂಜೆ ನೆರವೇರಿಸಿ ಬರೋಬ್ಬರಿ 8 ತಿಂಗಳಾಗಿವೆ. ಇಲ್ಲಿಯವರೆಗೂ ಹಿಡಿಮಣ್ಣು ರಸ್ತೆಗೆ ಬಿದ್ದಿಲ್ಲ. ಇನ್ನೇನು ಹೊಸ ರಸ್ತೆಯಾಗಿ ಸಂಚಾರ ಸುಗಮವಾಗಲಿದೆ ಎಂದು ನಂಬಿದ್ದ ಗ್ರಾಮಸ್ಥರು ಪರಿತಪಿಸುತ್ತಿದ್ದಾರೆ. ಮಳೆ ಬಂದರೆ ಸಾಕು ಗುಂಡಿಯಲ್ಲಿ ಸಿಲುಕುವ ಶಾಲಾ ವಾಹನವನ್ನು ಮಕ್ಕಳೇ ತಳ್ಳುವ ದುಃಸ್ಥಿತಿ ಎದುರಾಗಿದೆ. ಇದು ಮಸ್ಕಿ ಶಾಸಕರ ಬೇಜವಾಬ್ದಾರಿಯಿಂದ ಹಟ್ಟಿ ಗ್ರಾಮದ ಶಾಲಾ ಮಕ್ಕಳು ದಿನವೂ ಪಡಿಪಾಟಲು ಅನುಭವಿಸುತ್ತಿದ್ದಾರೆಂಬುದು ಗ್ರಾಮಸ್ಥರ ದೂರಾಗಿದೆ.
ಸಿಂಧನೂರು ತಾಲೂಕು ವ್ಯಾಪ್ತಿಗೆ ಒಳಪಡುವ ಮಸ್ಕಿ ವಿಧಾನಸಭೆ ಕ್ಷೇತ್ರದ ಹಟ್ಟಿ ಗ್ರಾಮದಿಂದ ವಿರುಪಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 2 ಕಿ.ಮೀ ಅಂತರದ ರಸ್ತೆ ಗುಂಡಿಮಯವಾಗಿದೆ. ಈ ಅಧ್ವಾನಗೊಂಡ ರಸ್ತೆಯಲ್ಲಿ ದಿನವೂ ಸಂಚರಿಸುವ ಗ್ರಾಮಸ್ಥರ ಅವಸ್ಥೆ ಹೇಳತೀರದು. ಈ ಮಾರ್ಗದಲ್ಲಿ ವಾಹನ ಚಲಾಯಿಸಲು ಡಬಲ್ ಗುಂಡಿಗೆಯೇ ಬೇಕು ಎನ್ನುತ್ತಾರೆ ವಾಹನ ಚಾಲಕರು. ಸಣ್ಣ ಮಳೆಗೂ ಕೆಸರುಮಯವಾಗುವ ರಸ್ತೆಯಲ್ಲಿ ಸೈಕಲ್ ಮೋಟರ್ ಓಡಿಸಲು ಯಮಯಾತನೆ ಅನುಭವಿಸುತ್ತಿದ್ದಾರೆ.

ಗುಂಡಿಗೆ ಚಕ್ರ ಸಿಲುಕಿ ಹೊರಳಿದ ಶಾಲಾ ವಾಹನ, ಮಕ್ಕಳು ಪಾರು !
ಸೋಮವಾರ ಖಾಸಗಿ ಶಾಲೆಯ ವಾಹನವೊಂದು ಮಕ್ಕಳನ್ನು ಹತ್ತಿಸಿಕೊಂಡು ವಿರುಪಾಪುರಕ್ಕೆ ಹೋಗುವ ಮಾರ್ಗಮಧ್ಯೆ ಚಕ್ರಗಳು ಗುಂಡಿಯಲ್ಲಿ ಸಿಲುಕಿ ಒಂದೆಡೆ ವಾಲುತ್ತಿದ್ದಂತೆ ಜಾಗೃತನಾದ ಚಾಲಕ ಮಕ್ಕಳನ್ನು ಬಸ್ಸಿನಿಂದ ಹೊರಗಡೆ ಇಳಿಸಿದ್ದಾನೆ. ಇದರಿಂದ ಅದೃಷ್ಟವಶಾತ್ ಅವಘಡ ತಪ್ಪಿದಂತಾಗಿದೆ.
‘ಕಾಮಗಾರಿಗೆ ಪೂಜೆ ಮಾಡಿ 8 ತಿಂಗಳಾದ್ರೂ ಕೆಲಸ ಆರಂಭಿಸಿಲ್ಲ’
“ಎಂಟು ತಿಂಗಳ ಹಿಂದೆ ಮಸ್ಕಿ ಎಮ್ಮೆಲ್ಲೆಯವರು, ಅಧಿಕಾರಿಗಳು ಊರಿಗೆ ಬಂತು, ಗುದ್ಲಿ, ಹಾರಿ ಹಿಡ್ಕಂಡು ರೋಡಿನ ಕೆಲಸಕ್ಕ ಪೂಜಿ ಮಾಡಿ ಹೋದವ್ರು ಒಳ್ಳಿ ನೋಡಿಲ್ಲ. ಮ್ಯಾಲಿಂದ ಮ್ಯಾಲೆ ಒಂದೇ ಸಮನೆ ಮಳಿಯಾಗಿ ರೋಡೆಂಬೋ ರೋಡು ಗೊಟ್ಟಗುಣಿ ಆಗಿ ಕುಂತೈತಿ. ಇಂತದ್ರಾಗ ನಮ್ ಮಕ್ಳು ದಿನ ಸಾಲಿಗೆ ನಡ್ಕಂಡು ಹೋತಾವ. ಕಾಲು ಜಾರಿ ಬಿದ್ದು ಮೈತುಂಬ ಹೊಲಸು ಮಾಡಿಕೆಂಡು ರ್ತಾವ. ಇನ್ನ ಸಾಲಿ ಬಸ್ಸು ಕೂಡ ಹುದ್ಲಾಗ ಸಿಗೇಬಿದ್ದು ಹುಡ್ರೆಲ್ಲ ಸಾಲಿಬಿಟ್ಟು ಮನಿಗೆ ವಾಪಸ್ ಬರಂಗ್ ಆಗೇತಿ ನೋಡ್ರಿ. ಪೂಜೆ ಮಾಡಿ 8 ತಿಂಗಳಾದ್ರೂ ಕೆಲಸ ಮಾಡ್ಸಿಲ್ಲ. ಈ ಎಮ್ಮೆಲ್ಲೆಯವರಿಗೆ ತಿಳೆಂಗಿಲ್ಲನು” ಎಂದು ಗ್ರಾಮಸ್ಥರೊಬ್ಬರು ಆಕ್ರೋಶ ವ್ಯಕ್ತಪಡಿಸುತ್ತಾರೆ.
‘ರಸ್ತೆ ಕೆಟ್ರೋಗಿರೋದ್ರಿಂದ್ ನಾಲ್ಕು ವರ್ಷದಿಂದ ಬಸ್ ಬರಲ್ಲ’
ಹಟ್ಟಿ ಗ್ರಾಮದಲ್ಲಿ 1500ಕ್ಕೂ ಹೆಚ್ಚು ಜನರಿದ್ದಾರೆ. ಇಲ್ಲಿಗೆ 4 ವರ್ಷದ ಹಿಂದೆ ಸಾರಿಗೆ ಸಂಸ್ಥೆ ಬಸ್ ಓಡಾಟ ಇತ್ತು. ಯಾವಾಗ ರಸ್ತೆ ಕೆಟ್ಟೋಯ್ತೋ ಆವಾಗಿಂದ ಬಸ್ಸು ಬರೋದೆ ನಿಂತೋಯ್ತು. ಸಾಲಿಗೆ, ಕೆಲ್ಸ-ಕಾರ್ಯಕ್ಕ ವಿರುಪಾಪುರಕ್ಕ ಹೋಗ್ಬೇಕಂದ್ರ ಜೀವ ಝಲ್ ಅಂತೈತಿ. ದಿನಾ ನಮ್ಮೂರಿಂದ ವಿರುಪಾಪುರಕ್ಕ ಹುಡುಗ್ರು ಸಾಲಿಗೆ ಹೋಗ್ತಾವ. ಈ ರೋಡಿನ ಸಲುವಾಗಿ ಮಕ್ಕಳ ಹೆಂಗ್ ಹೋಗ್ತಾವನು ಅಂತ ಅಂಜಿಕಿ ರ್ತೆöÊತಿ’ ಎಂದು ಗ್ರಾಮದ ವಿದ್ಯಾರ್ಥಿ ಪಾಲಕರೊಬ್ಬರು ಆತಂಕ ವ್ಯಕ್ತಪಡಿಸುತ್ತಾರೆ. ಜೋರು ಮಳೆ ಬಂದರೆ ರಸ್ತೆಯೆಲ್ಲಾ ರಾಡಿಮಯವಾಗಿ ಮಕ್ಕಳು ಶಾಲೆಗೆ ಅನಿವಾರ್ಯವಾಗಿ ರಜೆ ಹಾಕುವಂತಾಗಿದೆ ಎಂದು ಅವರು ಹೇಳುತ್ತಾರೆ.
ಮಕ್ಕಳ ಹಕ್ಕುಗಳ ಉಲ್ಲಂಘನೆ
ಸರ್ಕಾರ, ಸಂಬಂಧಿಸಿದ ಇಲಾಖೆ ಹಾಗೂ ಜನಪ್ರತಿನಿಧಿಗಳು ಶಾಲಾ ಮಕ್ಕಳು ಶಾಲೆಗೆ ಹಾಜರಾಗುವುದಕ್ಕೆ ಮೂಲ ಸೌಕರ್ಯಗಳನ್ನು ಒದಗಿಸುವುದು ಕಾನೂನಾತ್ಮಕವಾಗಿದ್ದು, ಆದರೆ ಕಳೆದ ಹಲವು ದಿನಗಳಿಂದ ಹಟ್ಟಿ-ವಿರುಪಾಪುರ ಗ್ರಾಮದ ಸಂಪರ್ಕ ರಸ್ತೆ ಕೆಟ್ಟು, ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವುದಕ್ಕೆ ಸಮಸ್ಯೆಯಾಗಿದೆ. ಇದೊಂಥರಾ ಮಕ್ಕಳ ಹಕ್ಕುಗಳಿಗೆ ಅಡೆತಡೆಯಾಗಿದೆ. ಹಾಗಾಗಿ ಈ ಕುರಿತು ಮಕ್ಕಳ ಹಕ್ಕುಗಳ ಘಟಕಕ್ಕೆ ದೂರು ದಾಖಲಿಸಲಾಗುವುದು ಎಂದು ಗ್ರಾಮದ ಯುವ ಮುಖಂಡರೊಬ್ಬರು ತಿಳಿಸಿದ್ದಾರೆ.
‘ವಾರದೊಳಗೆ ರಸ್ತೆ ಕಾಮಗಾರಿ ಆರಂಭಿಸದಿದ್ದರೆ ಮಸ್ಕಿ ಶಾಸಕರ ಕಾರ್ಯಾಲಯದ ಮುಂದೆ ಧರಣಿ’
ಹಟ್ಟಿ-ವಿರುಪಾಪುರ ಸಂಪರ್ಕ ರಸ್ತೆ ಕಾಮಗಾರಿ ವಾರದೊಳಗಾಗಿ ಆರಂಭಿಸದೇ ಹೋದರೆ ಮಸ್ಕಿ ಶಾಸಕರ ಕಾರ್ಯಾಲಯದ ಮುಂದೆ ಇಲ್ಲವೇ ಸಿಂಧನೂರಿನ ತಹಸಿಲ್ ಕಾರ್ಯಾಲಯದ ಮುಂದೆ ಶಾಲಾ ಮಕ್ಕಳೊಂದಿಗೆ ಸೇರಿಕೊಂಡು ಧರಣಿ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.