ಸಿಂಧನೂರು: ಸಿಜೆಐ ಮೇಲೆ ದಾಳಿ ಖಂಡಿಸಿ ಸಿಪಿಐ(ಎಂಎಲ್) ಲಿಬರೇಶನ್‌ನಿಂದ ಪ್ರತಿಭಟನೆ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 08

ಕೋರ್ಟ್ ಕಲಾಪದ ವೇಳೆಯೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ಶೂ ಎಸೆದು, ಸಂವಿಧಾನ ಮತ್ತು ನ್ಯಾಯಾಂಗದ ಮೇಲೆ ದಾಳಿ ನಡೆಸಿದ ದುಷ್ಕರ್ಮಿಯ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಸಿಪಿಐ(ಎಂಎಲ್) ಲಿಬರೇಶನ್ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟçಪತಿಗಳಿಗೆ ಬುಧವಾರ ಮನವಿ ರವಾನಿಸಲಾಯಿತು.
ದಲಿತ ಸಮುದಾಯದವರು ಉನ್ನತ ಪದವಿಗೇರಿದ್ದನ್ನು ಮನುವಾದಿಗಳು ಸಹಿಸುತ್ತಿಲ್ಲ: ಬಸವರಾಜ ಬೆಳಗುರ್ಕಿ
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ ಮಾತನಾಡಿ, “ದಲಿತ ಸಮುದಾಯದ ವ್ಯಕ್ತಿಯೊಬ್ಬರು ದೇಶದ ಅತ್ಯುನ್ನತ ಪದವಿಯಲ್ಲಿರುವುದನ್ನು ಸಹಿಸದ ಮನುವಾದಿ-ಜಾತಿವಾದಿ ಮನಸ್ಥಿತಿಯ ಕ್ರಿಮಿಯೊಬ್ಬ, ಕೋರ್ಟ್ ಕಲಾಪದ ಸಮಯದಲ್ಲೇ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿಯವರತ್ತ ಶೂ ಎಸೆದಿರುವ ಘಟನೆ ಆಘಾತಕಾರಿಯಾಗಿದ್ದು, ಈ ಹೇಯ ಕೃತ್ಯವನ್ನು ನಮ್ಮ ಪಕ್ಷ ಬಲವಾಗಿ ಖಂಡಿಸುತ್ತದೆ. ಈ ಕೂಡಲೇ ತಪ್ಪಿತಸ್ಥನನ್ನು ಬಂಧಿಸಿ ಕಠಿಣಾತಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು” ಆಗ್ರಹಿಸಿದರು.

Namma Sindhanuru Click For Breaking & Local News

ಸಂವಿಧಾನ ಮತ್ತು ನ್ಯಾಯಾಂಗದ ಮೇಲೆ ನೇರ ದಾಳಿ: ಬಸವರಾಜ ಕೊಂಡೆ
ಭಗತ್ ಆಟೋ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ ಮಾತನಾಡಿ “ದಾಳಿಕೋರ ಕೋರ್ಟ್ ಆವರಣದಿಂದ ಹೊರ ನಡೆಯುವ ವೇಳೆ “ಸನಾತನ ಧರ್ಮದ ಅಪಮಾನ ಸಹಿಸುವುದಿಲ್ಲ” ಎಂದು ಕೂಗಿದ್ದಾನೆ. ಈ ಸನಾತನವಾದಿಗಳು-ಮನುವಾದಿಗಳು ದೇಶಕ್ಕೆ ಸ್ವಾತಂತ್ರö್ಯ ಬಂದು 78 ವರ್ಷಗಳಾದರೂ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡAತಿಲ್ಲ. ಇದು ಕೇವಲ ಒಬ್ಬ ನ್ಯಾಯಾಧೀಶರ ಮೇಲಿನ ದಾಳಿಯಲ್ಲ ಇದು ಇಡೀ ಸಂವಿಧಾನ ಮತ್ತು ನ್ಯಾಯಾಂಗದ ಮೇಲಿನ ನೇರ ದಾಳಿಯಾಗಿದೆ. ಈ ದುಷ್ಕೃತ್ಯವು ಹಿಂದುತ್ವ ಕೋಮುವಾದಿ ಶಕ್ತಿಗಳು ಸಮಾಜಕ್ಕೆ ಇಂಜೆಕ್ಟ್ ಮಾಡಿದ ಮನುವಾದಿ ಮತ್ತು ಕೋಮು ವಿಷದ ಮತ್ತೊಂದು ಉದಾಹರಣೆಯಾಗಿದೆ. ಇತ್ತೀಚೆಗೆ ಬಿಜೆಪಿ ನಾಯಕರ ಜಾತಿವಾದ, ಮನುವಾದಿ ಮತ್ತು ಕೋಮುವಾದಿ ಹೇಳಿಕೆಗಳು ಇಂತಹ ಕೃತ್ಯಗಳಿಗೆ ಉತ್ತೇಜನ ನೀಡಿವೆ. ಇದು ಸಂಘ ಪರಿವಾರದ ಅಸಹಿಷ್ಣುತೆ ಮತ್ತು ಹಿಂದುತ್ವ ಶಕ್ತಿಗಳು ದೇಶದಾದ್ಯಂತ ಹರಡಿದ ವಿಭಜಕ ಸಿದ್ಧಾಂತಕ್ಕೆ ಸಾಕ್ಷಿಯಾಗಿದೆ. ಸಂಘ ಪರಿವಾರ ಹರಡಿದ ಕೋಮುವಾದಿ ಮತ್ತು ಜಾತಿವಾದಿ ವಿಷವು ದಲಿತ ನ್ಯಾಯಾಧೀಶರಾದ ಸಿಜೆಐ ಅವರನ್ನು ಸಹ ಬಹಿರಂಗವಾಗಿ ಗುರಿಯಾಗಿಸುವ ಹಂತವನ್ನು ತಲುಪಿರುವುದು ಇಡೀ ದೇಶದ ನಾಗರಿಕರಿಗೆ ಎಚ್ಚರಿಕೆ ಗಂಟೆಯಾಗಿದೆ” ಎಂದು ಗಮನ ಸೆಳೆದರು.
“ಸಿಜೆಐ ಅವರಿಗೆ ಹೀಗಾದರೆ ಸಾಮಾನ್ಯ ದಲಿತರಿಗೆಲ್ಲಿ ರಕ್ಷಣೆ” : ಆರ್‌.ಎಚ್‌.ಕಲಮಂಗಿ
ಪಕ್ಷದ ಮುಖಂಡ ಆರ್.ಎಚ್.ಕಲಮಂಗಿ ಮಾತನಾಡಿ “ಅಂಬೇಡ್ಕರ್‌ವಾದಿಯಾದ ಬಿ.ಆರ್.ಗವಾಯಿಯವರು ಇತ್ತೀಚಿಗೆ ಹಲವು ವಿಚಾರ ಸಂಕಿರಣಗಳಲ್ಲಿ ದೇಶದ ಜಾತ್ಯತೀತತೆ, ಬಹುತ್ವ ಸಂಸ್ಕೃತಿ ಹಾಗೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದು ಸಮಾಜವನ್ನು ವಿಭಜಿಸುವ ಕೋಮುವಾದಿ-ಜಾತಿವಾದಿ ಶಕ್ತಿಗಳ ಮತ್ತು ಸಂವಿಧಾನ ವಿರೋಧಿ ಬುಲ್ಡೋಜರ್ ಅನ್ಯಾಯದ ವಿರುದ್ಧ ನ್ಯಾಯದ ಧ್ವನಿ ಎತ್ತಿದ ಬೆನ್ನಲ್ಲೇ, ಅವರ ಮೇಲೆ ಇಂತಹ ವ್ಯವಸ್ಥಿತ ದಾಳಿ ನಡೆಸಲಾಗಿದೆ. ದಲಿತ ಸಮುದಾಯದಿಂದ ಬಂದು, ಈ ದೇಶದ ಅತ್ಯುನ್ನತ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಪದವಿಯನ್ನು ಅಲಂಕರಿಸಿರುವುದನ್ನು ಸಹಿಸದ ಮನುವಾದ ಶಕ್ತಿಗಳು ದಾಳಿ ಮಾಡುವ ಹಂತಕ್ಕೂ ಹೋಗಿರುವುದು ದೇಶದ ಪ್ರಜಾಪ್ರಭುತ್ವಕ್ಕೆ ಎದುರಾದ ಆಪತ್ತಾಗಿದೆ. ಇಂತಹ ಸಂದರ್ಭದಲ್ಲಿ ದಲಿತ ಸಮುದಾಯಗಳಿಗೆ ರಕ್ಷಣೆ ಎಲ್ಲಿ ?” ಎಂದು ಪ್ರಶ್ನಿಸಿದರು.
‘ಪ್ರಧಾನಿಗಳು ತಡವಾಗಿ ಪ್ರತಿಕ್ರಿಯಿಸಿದ್ದು ವಿಪರ್ಯಾಸ’
“ಐಪಿಎಲ್ ಅಥವಾ ಇನ್ನಿತರೆ ಕ್ರಿಕೆಟ್ ಪಂದ್ಯಾವಳಿ, ಸಮಾಜದ ಮೇಲ್ವರ್ಗಗಳ ಪ್ರಶಸ್ತಿ, ಗೌರವಗಳ ಬಗ್ಗೆ ತತ್‌ಕ್ಷಣ ಪ್ರತಿಕ್ರಿಯಿಸುವ ಪ್ರಧಾನಿ ನರೇಂದ್ರ ಮೋದಿಯವರು, ದೇಶದ ಅತ್ಯುನ್ನತ ಪದವಿಯಲ್ಲಿರುವ ಸುಪ್ರಿಂಕೋಟ್ ನ್ಯಾಯಾಧೀಶರ ಮೇಲೆ ಮನುವಾದಿಯಿಂದ ದಾಳಿ ನಡೆದು 9 ಗಂಟೆಗಳ ನಂತರ ಹೇಳಿಕೆ ನೀಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇಡೀ ಅಧಿಕಾರಶಾಹಿ ಆಡಳಿತ ವ್ಯವಸ್ಥೆಯನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡಿರುವ ಫ್ಯಾಸಿಸ್ಟ್ ಶಕ್ತಿಗಳು ಈಗ ನ್ಯಾಯಾಂಗದ ಮೇಲೆ ಆಕ್ರಮಣ ಮಾಡಲು ಬಹಿರಂಗ ದಾಳಿಗಿಳಿದಿವೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲೆಯೇ ಇಂತಹ ದಾಳಿಗಳು ನಡೆದರೆ, ಇನ್ನುಳಿದ ಕೋರ್ಟ್ನ ನ್ಯಾಯಾಧೀಶರ ಪರಿಸ್ಥಿತಿ ಹೇಗೆ ? ಇಡೀ ನ್ಯಾಯಾಂಗ ವ್ಯವಸ್ಥೆಯ ಮೇಲೆಯೇ ಸನಾತನವಾದಿಗಳು ನಮ್ಮ ಪರವಾಗಿ ತೀರ್ಪು ನೀಡದೇ ಹೋದರೆ ನಾವು ಸುಮ್ಮನಿರುವುದಿಲ್ಲ ಎಂದು ಪರೋಕ್ಷವಾಗಿ ಬೆದರಿಕೆ ಹಾಕಿದಂತಾಗಿದೆ. ಇದು ನ್ಯಾಯ ನಿರ್ಣಯದ ಮೇಲೆ ಭಾರಿ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಅಲ್ಲೋಲ-ಕಲ್ಲೋಲ ವಾತಾವರಣ ಸೃಷ್ಟಿಸಲಿದೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
‘ದೇಶದ್ರೋಹದ ಕೇಸ್ ದಾಖಲಿಸಿ ಬಂಧಿಸಿ’
“ಶೂ ಎಸೆದ ವಕೀಲನ ವಿರುದ್ಧ ದೇಶದ್ರೋಹಿ ಕಾನೂನಿನಡಿ ಕೇಸ್ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಮಾನ್ಯ ಬಿ.ಆರ್.ಗವಾಯಿ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು, ಇಂತಹ ದುಷ್ಕೃತ್ಯಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕೆಂದು” ಪಕ್ಷದಿಂದ ರಾಷ್ಟçಪತಿಯವರಿಗೆ ಮನವಿ ರವಾನಿಸಲಾಯಿತು. ಈ ಸಂದರ್ಭದಲ್ಲಿ ರಾಘವೇಂದ್ರ ಉಪ್ಪಳ, ದೇವರಾಜ ಉಪ್ಪಳ, ಬಸವರಾಜ ಬೆಳಗುರ್ಕಿ, ಶೇಕ್ಷಾವಲಿ ಜನತಾಕಾಲೋನಿ, ತಿಮ್ಮಾರಡ್ಡಿ, ದುರುಗಪ್ಪ ಬೆಳಗುರ್ಕಿ, ಶರಣಪ್ಪ ಬೆಳಗುರ್ಕಿ, ಮಲ್ಲಿಕಾರ್ಜುನ ಸಿಂಧನೂರು ಇದ್ದರು.


Spread the love

Leave a Reply

Your email address will not be published. Required fields are marked *