ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 18
ಕೊಪ್ಪಳದಲ್ಲಿ ಶಾಸಕ ಬಸವನಗೌಡ ಯತ್ನಾಳ ಸಾರ್ವಜನಿಕವಾಗಿ ದಲಿತ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿ ಅಸ್ಪೃಶ್ಯತೆ ಆಚರಿಸಿದ್ದು, ಕಾನೂನು ಬಾಹಿರ ಹಾಗೂ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಇವರನ್ನು ಶಾಸಕ ಸ್ಥಾನಗದಿಂದ ಕೂಡಲೇ ವಜಾಗೊಳಿಸಿ ಬಂಧಿಸಬೇಕೆAದು ಒತ್ತಾಯಿಸಿ ಸಿಪಿಐ(ಎಂಎಲ್) ಲಿಬರೇಶನ್ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟದಿಂದ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಗುರುವಾರ ರಾಜ್ಯಪಾಲರು ಹಾಗೂ ವಿಧಾನಸಭೆಯ ಸಭಾಧ್ಯಕ್ಷರಿಗೆ ಮನವಿ ರವಾನಿಸಲಾಯಿತು.

ಯತ್ನಾಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟ : ನಾಗರಾಜ್ ಪೂಜಾರ್ ಎಚ್ಚರಿಕೆ
ಸಿಪಿಐ(ಎಂಎಲ್) ಲಿಬರೇಶನ್ನ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಪೂಜಾರ್ ಮಾತನಾಡಿ, “ಹೂ ಹಾಕಲು ಸನಾತನಿಗಳೇ ಆಗಬೇಕು, ಸಾಮಾನ್ಯ ದಲಿತ ಮಹಿಳೆಗೂ ಅವಕಾಶ ಇಲ್ಲ” ಎಂದು ಹೇಳುವ ಮೂಲಕ ಸಾರ್ವಜನಿಕವಾಗಿ ಅಸ್ಪೃಶ್ಯತೆ ಆಚರಣೆ ಮಾಡಿದ್ದಲ್ಲದೇ, ಮಾಧ್ಯಮಗಳಲ್ಲಿ ಅಸ್ಪೃಶ್ಯತೆ ಆಚರಣೆಗೆ ಕರೆ ನೀಡಿ ದಲಿತ ಸಮುದಾಯವನ್ನು ಅವಮಾನಿಸಿ ಜಾತಿ ನಿಂದನೆ ಮಾಡಿದ್ದಾರೆ. ಚುನಾಯಿತ ಪ್ರತಿನಿಧಿಯಾಗಿದ್ದುಕೊಂಡು ನಾಚಿಕೆಗೇಡಿತನದಿಂದ ವರ್ತಿಸಿರುವುದು ಖಂಡನಾರ್ಹವಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ. ಕಂಡ ಕಂಡಲ್ಲಿ ಜಾತಿ-ಜಾತಿಗಳ ನಡುವೆ, ಧರ್ಮ-ಧರ್ಮಗಳ ನಡುವೆ ದ್ವೇಷ ಹರಡಿಸುವುದನ್ನೇ ಕೆಲಸವನ್ನಾಗಿ ಮಾಡಿಕೊಂಡಿರುವ ಬಸನಗೌಡ ಯತ್ನಾಳ ಕಳೆದ ಎರಡ್ಮೂರು ತಿಂಗಳಲ್ಲಿ ಹತ್ತಾರು ಕಡೆ ದ್ವೇಷ ಭಾಷಣ ಮಾಡಿ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕದಡಿದಲ್ಲದೇ ಅಶಾಂತಿಗೆ ಕಾರಣನಾಗಿದ್ದಾನೆ. ಇಷ್ಟಾದರೂ ಈತನ ಮೇಲೆ ಯಾವುದೇ ಕಾನೂನು ಕ್ರಮ ಆಗದೇ ಇರುವುದು ಸರ್ಕಾರ, ಅಧಿಕಾರಿಗಳು ಹಾಗೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರಿಗೆ ಅನುಮಾನ ಮೂಡುವಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನದ ಆರ್ಟಿಕಲ್ 15 ಉಲ್ಲಂಘನೆ : ಬಸವರಾಜ ಬೆಳಗುರ್ಕಿ
ಪಕ್ಷದ ತಾಲೂಕು ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ ಮಾತನಾಡಿ, “ಸಂವಿಧಾನ ಕಲಂ 15ರಲ್ಲಿ “ಧರ್ಮ, ಮೂಲವಂಶ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರಗಳ ಮೇಲೆ ತಾರತಮ್ಯದ ನಿಷೇಧ: (1) ರಾಜ್ಯವು ಯಾರೇ ನಾಗರಿಕನ ವಿರುದ್ಧ ಧರ್ಮ, ಮೂಲವಂಶ, ಜಾತಿ, ಲಿಂಗ, ಜನ್ಮಸ್ಥಳದ ಅಥವಾ ಅವುಗಳಲ್ಲಿ ಯಾವುದೇ ಒಂದರ ಆಧಾರದ ಮೇಲೆ ಮಾತ್ರವೇ ಯಾವುದೇ ತಾರತಮ್ಯವನ್ನು ಮಾಡತಕ್ಕದ್ದಲ್ಲ.” ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಜಾತಿನಿಂದನೆ ಕಾನೂನು ಬಾಹಿರವಾಗಿದ್ದು, ಅಪರಾಧ ಕೃತ್ಯವಾಗಿರುತ್ತದೆ. ಕೊಪ್ಪಳದಲ್ಲಿ ದಲಿತ ಮಹಿಳೆಯರನ್ನು ಜಾತಿಯ ಕಾರಣಕ್ಕೆ ನಿಂದಿಸಿ, ತಕ್ಷಣ ಕೋರ್ಟ್ ಮೊರೆ ಹೋಗಿ ಬಲವಂತದ ಕ್ರಮ ಜರುಗಿಸದಂತೆ ತಡೆಯಾಜ್ಞೆ ತಂದಿರುವುದು ನೋಡಿದರೆ ಈತನ ದ್ವೇಷ ಭಾಷಣಕ್ಕೆ ತಡೆಯೇ ಇಲ್ಲದಂತಾಗಿದೆ. ಸಂವಿಧಾನದ ಅಡಿಯಲ್ಲಿ ಆಯ್ಕೆಯಾಗಿ ಮತ್ತು ಅದರಡಿಯಲ್ಲಿ ರಚನೆಯಾಗಿರುವ ಕಾನೂನನ್ನೇ ಉಲ್ಲಂಘಿಸಿರುವ ಇವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.
ಯತ್ನಾಳರ ಮಾತು ಜಾತಿನಿಂದನೆಯಷ್ಟೇ ಅಲ್ಲದೇ, ಸ್ತ್ರೀದ್ವೇಷಿಯಾಗಿದೆ: ವಿರುಪಮ್ಮ
ರಾಜ್ಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿರುಪಮ್ಮ ಉದ್ಬಾಳ ಜೆ. ಮಾತನಾಡಿ, ಮನುವಾದಿ ಬಸನಗೌಡ ಯತ್ನಾಳ ಕಾನೂನು ಬಾಹಿರವಾಗಿ ಮನಬಂದಂತೆ ಮಾತನಾಡಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ. ದೇಶಕ್ಕೆ ಸ್ವಾತಂತ್ರö್ಯ ದೊರೆತು 78 ವರ್ಷಗಳಾದರೂ ಇಂದಿಗೂ ಅಸ್ಪೃಶ್ಯತೆ ಆಚರಣೆ ನಿಂತಿಲ್ಲ ಎನ್ನುವುದಕ್ಕೆ ಇದೊಂದು ಜ್ವಲಂತ ಸಾಕ್ಷಿಯಾಗಿದೆ. ಸದನದಲ್ಲಿ ಕಾನೂನು ರಚಿಸುವವರೇ, ಬಹಿರಂಗವಾಗಿ ಅಸ್ಪೃಶ್ಯತೆ ಆಚರಣೆ ಮಾಡಿದರೆ ಹೇಗೆ ?” ಎಂದು ಹೇಳಿದರು.
ಹಕ್ಕೊತ್ತಾಯಗಳು: ದಲಿತ ಮಹಿಳೆಯರ ಬಗ್ಗೆ ಜಾತಿ ನಿಂದನೆ ಮಾಡಿದ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಅವರನ್ನು ಈ ಕೂಡಲೇ ಶಾಸಕ ಸ್ಥಾನದಿಂದ ಅನರ್ಹಗೊಳಿಸಿ, ಬಂಧಿಸಬೇಕು, ಶಾಸಕ ಸ್ಥಾನದಲ್ಲಿದ್ದುಕೊಂಡು ದಲಿತ ಮಹಿಳೆಯರ ಬಗ್ಗೆ ಅವಹೇಳನ ಮಾಡಿ ಬಹಿರಂಗವಾಗಿ ಅಸ್ಪೃಶ್ಯತೆ ಆಚರಣೆ ಮಾಡಿರುವ ಶಾಸಕ ಯತ್ನಾಳ ಪ್ರಕರಣವನ್ನು ನ್ಯಾಯಾಂಗ ವ್ಯವಸ್ಥೆ ಗಂಭೀರವಾಗಿ ಪರಿಗಣಿಸಿ ಸಂವಿಧಾನದ ಅಡಿಯಲ್ಲಿ ಕ್ರಮ ಜರುಗಿಸಬೇಕು, ಅಸ್ಪೃಶ್ಯತೆ ಆಚರಣೆ ಮಾಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂಬ ಬೇಡಿಕೆಯ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಡಿಎಸ್ಎಸ್ ಸಂಚಾಲಕ ಮಂಜುನಾಥ ಗಾಂಧಿನಗರ, ಸಿಪಿಐ(ಎಂಎಲ್) ಲಿಬರೇಶನ್ನ ಆರ್.ಎಚ್.ಕಲಮಂಗಿ, ಯಮನೂರಪ್ಪ, ಹುಸೇನಪ್ಪ ಅರಳಹಳ್ಳಿ, ಬಸವರಾಜ, ದೇವಪ್ಪ ಅರಳಹಳ್ಳಿ, ರಮೇಶ ಅರಳಹಳ್ಳಿ, ಮಹಿಳಾ ಮುಖಂಡರಾದ ಇಂದ್ರಮ್ಮ, ಶಾಂಭವಿ ಸೇರಿದಂತೆ ಇನ್ನಿತರರಿದ್ದರು.
