ಸಿಂಧನೂರು: ಭಗತ್‌ಸಿಂಗ್ ಆಟೋ ಚಾಲಕರ ಸಂಘದಿoದ ಭಗತ್‌ಸಿಂಗ್ ಭಾವಚಿತ್ರ ಮೆರವಣಿಗೆ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 23

ಭಗತ್‌ಸಿಂಗ್ ಹುತಾತ್ಮ ದಿನಾಚರಣೆ ನಿಮಿತ್ತ, ಭಗತ್‌ಸಿಂಗ್ ಆಟೋ ಚಾಲಕರ ಸಂಘದ ನೇತೃತ್ವದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ‘ಲಾಲ್ ಸಲಾಂ’ ಆಟೋ ಮೆರವಣಿಗೆ ನಡೆಯಿತು.
ಬೆಳಿಗ್ಗೆ ಎಪಿಎಂಸಿಯಿoದ ಆರಂಭವಾದ ಮೆರವಣಿಗೆ ಬಸವವೃತ್ತ, ಗಾಂಧಿವೃತ್ತ, ಕನಕದಾಸ ವೃತ್ತದ ಮೂಲಕ ಸಂಚರಿಸಿ ಕೆಇಬಿ ಕಚೇರಿ ಮುಂಭಾಗ ತಲುಪಿತು. ಮೆರವಣಿಗೆಯ ಉದ್ದಕ್ಕೂ ಅಟೋ ಚಾಲಕರು ಭಗತ್‌ಸಿಂಗ್ ಅವರ ಪರವಾಗಿ ಘೋಷಣೆ ಕೂಗಿದರು. ಪ್ರತಿ ಆಟೋದ ಮೇಲೂ ಭಗತ್‌ಸಿಂಗ್ ಅವರ ಭಾವಚಿತ್ರ ಸಾರ್ವಜನಿಕರನ್ನು ಆಕರ್ಷಿಸಿತು.

Namma Sindhanuru Click For Breaking & Local News

ಭಗತ್‌ಸಿಂಗ್ ನಮಗೆ ಸ್ಫೂರ್ತಿ: ನಾಗರಾಜ್ ಪೂಜಾರ್
ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ನಾಗರಾಜ ಪೂಜಾರ್ ಮಾತನಾಡಿ, ಭಗತ್ ಸಿಂಗ್ ಚಂದ್ರಶೇಖರ್ ಆಜಾದ್, ಸುಖದೇವ್ ಹಾಗೂ ರಾಜಗುರು ಅವರ ರಾಜೀರಹಿತ ಹೋರಾಟ ಬ್ರಿಟಿಷರ ಗುಂಡಿಗೆಯನ್ನೇ ನಡುಗಿಸಿತ್ತು. ದೇಶದ ಜನರ ವಿಮೋಚನೆಗಾಗಿ ಈ ಸ್ವಾತಂತ್ರö್ಯ ಸೇನಾನಿಗಳು ದಿಟ್ಟತನದಿಂದ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಭಗತ್‌ಸಿಂಗ್ ಮತ್ತು ಗೆಳೆಯರು ದೇಶದ ಜನರನ್ನು ಬ್ರಿಟಿಷರಿಂದ ವಿಮೋಚನೆಗೊಳಿಸುವುದಷ್ಟೇ ಅಲ್ಲದೇ ಭವಿಷ್ಯದ ಭಾರತವನ್ನು ಕಟ್ಟುವ ಮುನ್ನೋಟವನ್ನು ಹೊಂದಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಬಂಡವಾಳಶಾಹಿ ಮತ್ತು ಕಾರ್ಪೊರೇಟ್ ಶಕ್ತಿಗಳು ತಮ್ಮ ಗುಪ್ತ ಕಾರ್ಯಸೂಚಿಯ ಮೂಲಕ ದೇಶದ ವಿದ್ಯಾರ್ಥಿ, ಯುವಜನರನ್ನು ವೈಚಾರಿಕವಾಗಿ ಪ್ರಬುದ್ಧರಾಗದಂತೆ ನೋಡಿಕೊಳ್ಳುತ್ತಿವೆ. ಅಲ್ಲದೇ ಸಾಂಸ್ಕೃತಿಕ ದುರ್ದಾಳಿಯ ಮೂಲಕ ಬಡತನ, ನಿರುದ್ಯೋಗ, ಅಸಮಾನತೆ, ಅನಾರೋಗ್ಯ ಸೇರಿದಂತೆ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಯುವಕರು ವಿಮುಖರಾಗುವಂತೆ ಮಾಡಿ ಇಲ್ಲಿನ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿವೆ. ಸಾಮ್ರಾಜ್ಯಶಾಹಿಗಳ ಈ ತಂತ್ರಗಾರಿಕೆಯನ್ನು ಬುಡಮೇಲುಗೊಳಿಸಿ ಜನ ಚಳವಳಿ ರೂಪಿಸಬೇಕಿದೆ ಎಂದು ಹೇಳಿದರು.
ಕೇಂದ್ರ ಬಿಜೆಪಿ ಸರ್ಕಾರದಿಂದ ಜನ ವಿರೋಧಿ ಕಾನೂನು ಜಾರಿ: ಬಸವರಾಜ ಕೊಂಡೆ ಆರೋಪ
ಭಗತ್‌ಸಿಂಗ್ ಆಟೊ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರ ರೈತ, ದಲಿತ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿ ಮಾಡುವ ಮೂಲಕ ದೇಶದ ಜನರನ್ನು ಸಂಕಷ್ಟದ ಕುಲುಮೆಗೆ ತಳ್ಳಿದೆ. ಇಡೀ ದೇಶದ ಸಂಪತ್ತನ್ನು ಅಂದಾನಿ, ಅಂಬಾನಿಯoತಹ ಕಾರ್ಪೋರೇಟ್ ಉದ್ಯಮ ಶಕ್ತಿಗಳು ಕೊಳ್ಳೆ ಹೊಡೆಯಲು ಅನುವು ಮಾಡಿಕೊಟ್ಟಿದೆ. ದೇಶದ ಜನರ ತೆರಿಗೆಯಲ್ಲಿ ಕಟ್ಟಿದ ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ಬಂಡವಾಳಿಗರ ಆದಾಯವನ್ನು ದುಪ್ಪಟ್ಟು ಮಾಡಲಾಗುತ್ತಿದೆ ಎಂದು ಆಪಾದಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಎಕ್ಕಿ, ಆರ್.ಎಚ್ ಕಲಮಂಗಿ, ಸಿಪಿಐಎಂಎಲ್ ಲಿಬರೇಶನ್ ತಾಲೂಕು ಕಾರ್ಯದರ್ಶಿ ಬಸವರಾಜ ಬೇಳಗುರ್ಕಿ, ಶೇಕ್ಷಾವಲಿ, ನಾಗಪ್ಪ ಬಿಂಗಿ, ಹನುಮಂತ ಬಾಲಿ, ಚಂದಾಹುಸೇನ್, ರಶೀದ್, ಶೌಕತ್ ಅಲಿ, ಶಿವರಾಜ್, ಗೊವಿಂದ್ ಉಪ್ಪಾರ, ಶಿವು ಗಿರಿಜಾಲಿ, ಮಾಳಪ್ಪ, ಮಹಿಬೂಬ್, ಶಿವರಾಜ್,ಮುರುಗೇಶ್,ಶಿವು ಭಜಂತ್ರಿ, ವೆಂಕಟೇಶ್ ಶೆಟ್ಟಿ ಸೇರಿದಂತೆ ಆಟೋ ಚಾಲಕರ ಸಂಘದ ಸದಸ್ಯರು, ಪದಾಧಿಕಾರಿಗಳು ಇದ್ದರು.


Spread the love

Leave a Reply

Your email address will not be published. Required fields are marked *