ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 23
ತಾಲೂಕಿನ ರಾಗಲಪರ್ವಿ ಗ್ರಾಮದಲ್ಲಿರುವ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ನಿಲಯ ಹಾಗೂ ಪ್ರೌಢಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಬಸವಲಿಂಗಪ್ಪ ಅವರು ಬುಧವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ವಸತಿ ನಿಲಯದ ಮೊದಲನೆ ಮಹಡಿಯಲ್ಲಿ ತಡೆಗೋಡೆ ನಿರ್ಮಾಣ, ಶಾಲಾ ಕಾಂಪೌAಡ್ ಗೇಟ್ ಅಳವಡಿಸುವುದು ಹಾಗೂ ಸಮರ್ಪಕ ಬಳಕೆ ನೀರು ಪೂರೈಕೆ ಸೇರಿದಂತೆ ಇನ್ನಿತರೆ ಮೂಲ ಸೌಕರ್ಯಗಳ ಕೊರತೆ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ತಾಲೂಕು ಘಟಕದಿಂದ ಇತ್ತೀಚೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ ಗಮನ ಸೆಳೆಯಲಾಗಿತ್ತು.
‘ಸಮಸ್ಯೆ ಪರಿಹರಿಸಲಾಗುವುದು’
ವಸತಿ ಶಾಲೆಯ ಸಿಬ್ಬಂದಿ, ಪ್ರೌಢಶಾಲೆಯ ಶಿಕ್ಷಕರು, ಮುಖ್ಯಗುರುಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಚರ್ಚಿಸಿದ ಬಿಇಒ ಅವರು ವಸತಿ ಶಾಲೆಯಲ್ಲಿನ ಸಮಸ್ಯೆ ಸೇರಿದಂತೆ, ಮೂಲ ಸೌಕರ್ಯಗಳ ಕೊರತೆ ಬಗ್ಗೆ ವಿವರಣೆ ಪಡೆದರು. ಆದಷ್ಟು ಬೇಗ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯೆ ಸುವರ್ಣ ಕಟ್ನಳ್ಳಿ, ಕರವೇ ಸ್ವಾಭಿಮಾನಿ ಬಣದ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಗಾಣಗೇರ, ಪ್ರಧಾನ ಕಾರ್ಯದರ್ಶಿ ಅಯ್ಯಪ್ಪ ಮೇಟಿ, ನಗರ ಯುವ ಘಟಕದ ಅಧ್ಯಕ್ಷ ರುದ್ರಗೌಡ, ಮುಖಂಡರಾದ ಪರಶುರಾಮ ಗೀತಾಕ್ಯಾಂಪ್, ಪ್ರಶಾಂತ್ಕುಮಾರ್ ಇನ್ನಿತರರಿದ್ದರು.