ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 20
ನಗರದ ವಸತಿ ರಹಿತರಿಗೆ ಮತ್ತು ಬಡವರಿಗೆ ನಿವೇಶನ, ವಸತಿ ಸೌಲಭ್ಯ ಹಾಗೂ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಸಿಪಿಐ(ಎಂಎಲ್)ರೆಡ್ ಸ್ಟಾರ್ ಮತ್ತು ಕರ್ನಾಟಕ ರೈತ ಸಂಘ (ಎಐಕೆಕೆಎಸ್)ದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ಪೌರಾಯುಕ್ತ ಪಾಂಡುರAಗ ಇಟಗಿ ಅವರಿಗೆ ಮಂಗಳವಾರ ಮನವಿಪತ್ರ ಸಲ್ಲಿಸಲಾಯಿತು.
ಬಡವರಿಗೆ, ವಸತಿಹೀನರಿಗೆ ಮನೆ ಸೌಕರ್ಯ ಕಲ್ಪಿಸಲು ಎಂ.ಗಂಗಾಧರ ಒತ್ತಾಯ
ಸಿಂಧನೂರು ಸರ್ವೆ ನಂಬರ್ 768/1 ಸರ್ಕಾರಿ ಸ್ಥಳದಲ್ಲಿ ಕಳೆದ 25-30 ವರ್ಷಗಳಿಂದ ವಾಸ ಮಾಡುತ್ತಿರುವ ಬಡಜನರು ಅಕ್ರಮ-ಸಕ್ರಮ ಅರ್ಜಿ ಹಾಕಿದ ವಾರ್ಡ್ ನಂಬರ್ 6 ಕಾಟೀಬೇಸ್ (ದೋಬಿಗಲ್ಲಿ)ಯಲ್ಲಿರುವ ನಿವೇಶನ ರಹಿತ ಕುಟುಂಬಗಳಿಗೆ ಹಕ್ಕುಪತ್ರ ನೀಡುವುದು, ನಿವೇಶನಕ್ಕಾಗಿ ನಗರಸಭೆಗೆ ಅರ್ಜಿ ಹಾಕಿದ ನಗರದ ಬೀದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಹೋಟೆಲ್ ಹಾಗೂ ಗೃಹ ಕಾರ್ಮಿಕರು ಮತ್ತು ಹಮಾಲಿಗಳು ಎಲ್ಲರಿಗೂ ಹಕ್ಕುಪತ್ರ ನೀಡಬೇಕು, ನಗರ ಮತ್ತು ತಾಲೂಕಿನಲ್ಲಿ ಸರ್ಕಾರಿ ಭೂಮಿಗಳ ಸಮಗ್ರ ಸರ್ವೆ ನಡೆಸಿ, ದಲ್ಲಾಳಿಗಳು, ಪ್ರಭಾವಿಗಳ, ನೆಲಗಳ್ಳರ ಅಕ್ರಮ ಒತ್ತುವರಿ ತೆರವುಗೊಳಿಸಿ, ಬಡವರಿಗೆ ಭೂಮಿ ಹಾಗೂ ನಿವೇಶನ ನೀಡುವುದು, ನಗರ ಪೊಲೀಸ್ ಠಾಣೆ ಎದುರಿಗಿರುವ ವಾರ್ಡ್ ನಂಬರ್ 6 ಕಾಟಿಬೇಸ್(ದೋಬಿಗಲ್ಲಿ)ಗೆ ಹೋಗುವ ರಾಯಚೂರು ಮುಖ್ಯರಸ್ತೆ ಪಕ್ಕದ ಚರಂಡಿ ಕುಸಿದು ದೊಡ್ಡ ಬೊಂಗಾ ಬಿದ್ದಿದ್ದು, ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗಿದೆ. ಕೂಡಲೇ ಚರಂಡಿಗೆ ಹೊಸ ಸ್ಲ್ಯಾಬ್ ಹಾಕಿಸಬೇಕು, ನಗರದಲ್ಲಿ ಉದ್ಯೋಗ ಖಾತ್ರಿ ಕೆಲಸ ಆರಂಭಿಸಿ ಗುಳೆ ಹೋಗುವುದನ್ನು ತಪ್ಪಿಸಬೇಕು, ನಗರದ ಎಲ್ಲಾ ವಾರ್ಡಗಳಲ್ಲಿ ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ, ಸ್ವಚ್ಛತೆ, ಬೀದಿ ದೀಪದ ಸೌಕರ್ಯ ಕಲ್ಪಿಸಬೇಕು ಎಂಬ ಹಕ್ಕೊತ್ತಾಯಗಳ ಮನವಿಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಂ.ಗಂಗಾಧರ್, ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಹೆಚ್.ಆರ್ ಹೊಸಮನಿ, ಹನುಮಂತಪ್ಪ ಗೋಡಿಹಾಳ, ಹುಲುಗಪ್ಪ ಬಳ್ಳಾರಿ, ರಾಮು, ದರಾಗಯ್ಯ, ಶಂಕ್ರಪ್ಪ, ಅಂಬಣ್ಣ, ಭಾರತಿ, ಹುಸೇನಭಿ, ಹುಸೇನಮ್ಮ, ದ್ರಾಕ್ಷಯಣಮ್ಮ, ಮಹಿಮುದ ಬೇಗಮ್, ಮಹಾದೇವಮ್ಮ, ಯಮನೂರ, ಕೇಶವ, ಶಿವು, ಯಲ್ಲಪ್ಪಗೌಡ, ಕಾಶೀನಾಥ್ ಇತರರು ಇದ್ದರು.
