ಸಿಂಧನೂರು.ಮಾರ್ಚ್ 21
ತಾಲೂಕಿನ ಹೊಸಳ್ಳಿಕ್ಯಾಂಪ್.ಇ.ಜೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6 ಮತ್ತು 7ನೇ ತರಗತಿ ಅಭ್ಯಾಸ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಮಧ್ಯಾಹ್ನ ಶಾಲೆ ಬಿಟ್ಟ ನಂತರ ಊರಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬಂದ್ ಅಪರಿಚಿತ ಬೈಕ್ ಸವಾರನೊಬ್ಬ ಊರಿಗೆ ಕರೆದುಕೊಂಡು ಹೋಗುವುದಾಗಿ ಅಪ್ರಾಪ್ತ ಬಾಲಕಿಯರನ್ನು ಬೈಕ್ಮೇಲೆ ಹತ್ತಿಸಿಕೊಂಡು ದಾರಿಯ ಮಧ್ಯೆ ಅತ್ಯಾಚಾರಕ್ಕೆ ಯತ್ನಿಸಿ ಪರಾರಿಯಾದ ಘಟನೆ ಮರ್ನಾಲ್ಕು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಪರಿಚಿತ ಬೈಕ್ ಸವಾರನ ಕಿರುಕುಳ ಅರಿತ ಬಾಲಕಿಯೋರ್ವಳು ಬೈಕ್ನಿಂದ ಜಿಗಿದು ತಪ್ಪಿಸಿಕೊಂಡರೆ, ಇನ್ನೊಬ್ಬ ಬಾಲಕಿಗೆ ಕಿರುಕುಳ ಪ್ರತಿರೋಧಿಸಿದ್ದಕ್ಕೆ ಆಕೆಯನ್ನು ದಾರಿ ಮಧ್ಯೆ ತಳ್ಳಿ ಆತ ಅಲ್ಲಿಂದ ಪರಾರಿಯಾಗಿರುವುದು ಗೊತ್ತಾಗಿದೆ.
ಬಾಲಕಿಯರ ಮೇಲೆ ನಡೆದ ಲೈಂಗಿಕ ದುಷ್ಕೃತ್ಯ ಏನದು ?
ಈ ಶಾಲೆಗೆ ಸಮೀಪವಿರುವ ಕ್ಯಾಂಪ್ವೊಂದರ ಇಬ್ಬರು ವಿದ್ಯಾರ್ಥಿನಿಯರು ಮಧ್ಯಾಹ್ನ ಶಾಲೆ ಮುಗಿದ ನಂತರ ಕ್ಯಾಂಪ್ಗೆ ನಡೆದುಕೊಂಡು ಹೋಗುತ್ತಿರುವಾಗ ಅಪರಿಚಿತ ಬೈಕ್ ಸವಾರನೊಬ್ಬ ಕ್ಯಾಂಪ್ಗೆ ಬಿಡುವುದಾಗಿ ಹೇಳಿ ಇಬ್ಬರನ್ನು ಬೈಕ್ ಮೇಲೆ ಹತ್ತಿಸಿಕೊಂಡಿದ್ದಾನೆ. ತದನಂತರ ದಾರಿ ಮಧ್ಯೆ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಹೇಳಲಾಗುತ್ತಿದೆ. ಅಪರಿಚಿತ ಬೈಕ್ ಸವಾರನ ಅಸಭ್ಯ, ಅನುಚಿತ ವರ್ತನೆ ಹಾಗೂ ಲೈಂಗಿಕ ಕಿರುಕುಳದಿಂದ ಭಯಗೊಂಡ ಹಿಂಬದಿ ಕುಳಿತ ವಿದ್ಯಾರ್ಥಿನಿಯೊಬ್ಬಳು ಬೈಕ್ನಿಂದ ಜಿಗಿದಿದ್ದಾಳೆ. ಈ ವೇಳೆ ಆಕೆಗೆ ತೆರಚಿದ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ದಾರಿಯಲ್ಲಿ ಬೈಕ್ ನಿಲ್ಲಿಸಿದ ಬೈಕ್ ಸವಾರ ಮತ್ತೋರ್ವ ಬಾಲಕಿಗೆ ಕಿರುಕುಳ ನೀಡಿದ್ದಾನೆ. ಆಕೆ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಆಕೆಯನ್ನು ತಳ್ಳಿ ಪರಾರಿಯಾಗಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ. ನೆಲಕ್ಕೆ ತಳ್ಳಲ್ಪಟ್ಟ ವಿದ್ಯಾರ್ಥಿನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಆಕೆಯನ್ನು ಬೇರೆಡೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಪಾಲಕರಲ್ಲಿ ಆತಂಕ
ಅಂದಾಜು ಕಳೆದ ಮೂರ್ನಾಲ್ಕು ದಿನಗಳ ಹಿಂದೆಯೇ ಈ ದುಷ್ಕೃತ್ಯ ನಡೆದಿದ್ದು, ಈ ವಿಷಯ ಕ್ಯಾಂಪ್ನ ನಿವಾಸಿಗಳಿಗೆ ಗೊತ್ತಾಗುತ್ತಿದ್ದಂತೆ ಪಾಲಕರು ಬೆಚ್ಚಿಬಿದ್ದಿದ್ದಾರೆ. ಈ ಘಟನೆ ಕುರಿತು ಹಲವರಿಗೆ ಮಾಹಿತಿ ಇದ್ದರೂ ಪೊಲೀಸರಿಗಾಗಲೀ ಸಂಬಂಧಿಸಿದ ಇಲಾಖೆಯವರಿಗಾಗಿ ಮಾಹಿತಿ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ.
ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ ಯಾರು ?
ಶಾಲೆ ಮುಗಿದ ನಂತರ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಯರನ್ನು ಅದೇ ಊರಿನ ಕಡೆಗೆ ಹೊರಟಿದ್ದ ಬೈಕ್ ಸವಾರ ಊರಿಗೆ ಬಿಡುವುದಾಗಿ ಪುಸಲಾಯಿಸಿ, ಅವರನ್ನು ಬೈಕ್ಮೇಲೆ ಹತ್ತಿಸಿಕೊಂಡು ದಾರಿ ಮಧ್ಯೆ ಬಾಲಕಿಯರಿಗೆ ಕಿರುಕುಳ ನೀಡಿದ ವ್ಯಕ್ತಿ ಯಾರು ? ಎಂಬುದು ಇನ್ನೂ ತಿಳಿದುಬಂದಿಲ್ಲ. ವ್ಯಕ್ತಿ ಮಧ್ಯ ವಯಸ್ಕನಾಗಿದ್ದನೆಂದು ಹೇಳಲಾಗುತ್ತಿದ್ದು, ಅತ್ಯಾಚಾರಕ್ಕೆ ಯತ್ನಿಸಿ, ಬಾಲಕಿಯರು ಪ್ರತಿರೋಧಿಸಿದಾಗ ಜನರಿಗೆ ಎಲ್ಲಿ ಗೊತ್ತಾಗುತ್ತದೆ ಎಂದು ಹೆದರಿ ಬೈಕ್ ಮೇಲಿಂದ ತಳ್ಳಿ ಪರಾರಿಯಾಗಿದ್ದಾನೆಂದು ಹೇಳಲಾಗುತ್ತಿದೆ. ಪೊಲೀಸ್ ತನಿಖೆಯ ನಂತರವೇ ಆರೋಪಿ ಯಾರು ಎಂಬುದು ಪತ್ತೆಯಾಗಬೇಕಿದೆ.