ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 27
ತಾಲೂಕಿನ ಅಂಬಾಮಠ ಅಂಬಾದೇವಿ ಜಾತ್ರಾ ಮಹೋತ್ಸವ ನಿಮಿತ್ತ, ಜ.3ರಂದು ಮಹಾರಥೋತ್ಸವ ನಡೆಯಲಿದ್ದು, ಶನಿವಾರ ಶಾಸಕ ಹಂಪನಗೌಡ ಬಾದರ್ಲಿ ಅವರು ಭೇಟಿ ನೀಡಿ ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವ ಪೂರ್ವ ಸಿದ್ಧತೆಗಳನ್ನು ವೀಕ್ಷಿಸಿದರು.

ಮಹಾರಥೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಆದಿಯಾಗಿ ವಿವಿಧ ಇಲಾಖೆಗಳ ಸಚಿವರು, ಸಂಸದರು, ಶಾಸಕರು ಸೇರಿದಂತೆ ಪ್ರಮುಖರು ಆಗಮಿಸಲಿರುವ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ವಿವಿಧ ಕೆಲಸ ಕಾರ್ಯಗಳು ಚುರುಕಿನಿಂದ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಶಾಸಕರು ದೇವಸ್ಥಾನ ಆವರಣ, ಮಹಾರಥಬೀದಿ, ಚತುಷ್ಪಥ ರಸ್ತೆ, ಕುಡಿಯುವ ನೀರಿನ ಕೆರೆ ಪ್ರದೇಶವನ್ನು ವೀಕ್ಷಿಸಿದರು. ತದನಂತರ ನೂತನ ದೇವಸ್ಥಾನದ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದ್ದು, ಕೆತ್ತನೆಯಲ್ಲಿ ತೊಡಗಿರುವ ಶಿಲ್ಪಿಕಾರರೊಂದಿಗೆ ಚರ್ಚಿಸಿದರು. ಇಲ್ಲಿಯವರೆಗೂ ಕೈಗೊಂಡಿರುವ ಕಾರ್ಯಚಟುವಟಿಕೆಗಳು ಹಾಗೂ ಭಕ್ತರ ಅನುಕೂಲಕ್ಕಾಗಿ ಇನ್ನೂ ಕೈಗೊಳ್ಳಬೇಕಾದ ಕೆಲಸ ಕಾರ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಅರುಣಕುಮಾರ್ ದೇಸಾಯಿ, ತಾ.ಪಂ. ಇಒ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಪಾಂಡುರAಗ ಇಟಗಿ, ಕಾಂಗ್ರೆಸ್ ಮುಖಂಡ ಆರ್.ತಿಮ್ಮಯ್ಯ ನಾಯಕ, ಆರ್.ಸಿ.ಪಾಟೀಲ್ ಸೇರಿದಂತೆ ಇನ್ನಿತರರಿದ್ದರು.

