ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 23
ಯುವಕರು ದೈಹಿಕ ಮತ್ತು ಮಾನಸಿಕ ಸದೃಢತೆಯಿಂದಿರಲು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಗುಣಮಟ್ಟದ ಆಹಾರ ಸೇವಿಸುವ ಜೊತೆಗೆ ಮಾನಸಿಕ ಒತ್ತಡಗಳನ್ನು ನಿಭಾಯಿಸುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಇದು ಯುವಕರನ್ನು ಖಿನ್ನತೆಯಿಂದ ದೂರ ಮಾಡುತ್ತದೆ ಎಂದು ಸರ್ಕಾರಿ ಜೂನಿಯರ್ ಕಾಲೇಜು ಪ್ರಾಚಾರ್ಯ ಡಾ.ಎಸ್.ಶಿವರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಪಾಟೀಲ್ ಶಿಕ್ಷಣ ಸಂಸ್ಥೆಯ ಮಹಿಳಾ ಮಹಾವಿದ್ಯಾಲಯದಲ್ಲಿ ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ರಾಷ್ಟ್ರೀಯ ಸೇವಾ ಯೋಜನೆ, ಬಾಲ್ ಉಮಂಗ್ ದೃಶ್ಯ ಸಂಸ್ಥಾ ಸಹಯೋಗದಲ್ಲಿ ಶನಿವಾರ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಹಾಗೂ ಯುವಕರಿಗೆ ದೈಹಿಕ ಸಾಮರ್ಥ್ಯದ ಮೌಲ್ಯಮಾಪನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಆಧುನಿಕ ಜೀವನ ಶೈಲಿಯಿಂದ ಯುವಕರು ಮಾನಸಿಕ ಖಿನ್ನತೆ, ದುಶ್ಚಟ ಹಾಗೂ ಹಲವಾರು ಒತ್ತಡಗಳಿಗೆ ಗುರಿಯಾಗುತ್ತಿದ್ದಾರೆ. ಕೆಲವರು ಈ ಒತ್ತಡ ನಿಭಾಯಿಸಲಾಗದೇ ದುಡುಕುತ್ತಿರುವುದು ವರದಿಯಾಗುತ್ತಿದೆ. ಹಾಗಾಗಿ ಯುವಕರಿಗೆ ಕಾರ್ಯಾಗಾರಗಳನ್ನು ಏರ್ಪಡಿಸುವ ಮೂಲಕ ಅವರಲ್ಲಿ ತಿಳಿವಳಿಕೆ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ತರಬೇತಿದಾರ ಮತ್ತು ಕಾರ್ಯಕ್ರಮ ಅಧಿಕಾರಿ ಆರ್.ಸಿ.ಪಾಟೀಲ್ ಮಾತನಾಡಿ, ಯುವಕರಲ್ಲಿ ದೈಹಿಕ ಸಾಮರ್ಥ್ಯದ ಮೌಲ್ಯಮಾಪನದ ಜೊತೆಗೆ ವ್ಯಸನಮುಕ್ತರಾಗಬೇಕು. ಸಮತೋಲಿತ ಆಹಾರ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಈ ಕಾರ್ಯಾಗಾರದಲ್ಲಿ ವಿವಿಧ ಮಹಾವಿದ್ಯಾಲಯದ 20 ಕಾರ್ಯಕ್ರಮ ಅಧಿಕಾರಿಗಳು ಭಾಗವಹಿಸಿದ್ದರು. ಅವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪ್ರಾಂಶುಪಾಲರಾದ ಮಾರುತಿ, ನ್ಯಾಕ್ ಸಂಯೋಜಕರಾದ ಸೂಗೂರಯ್ಯ ಸಾಲಿಮಠ, ಉಪನ್ಯಾಸಕರಾದ ಸಂದೀಪ್, ಪಂಪಪಾತಿ, ಶ್ಯಾಮ್ಸುಂದರ,ಸುಹಾಸಿನಿ, ಚೈತ್ರ್ರಾ, ಸುಪ್ರಿಯಾ, ಅಕ್ಕಮಹಾದೇವಿ, ನಿಶಾಂತ್ ಇದ್ದರು.
