(ಪೊಲಿಟಿಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಏಪ್ರಿಲ್ 16
ದಿಢೀರ್ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರು ಮಂಗಳವಾರ ಹಾಲಿ ಸಂಸದ ಸಂಗಣ್ಣ ಕರಡಿ ಅವರ ನಿವಾಸಕ್ಕೆ ತೆರಳಿ ಅವರ ಆಶೀರ್ವಾದ ಪಡೆದುಕೊಂಡು ನಾಮಪತ್ರ ಸಲ್ಲಿಕೆಗೆ ಮುಂದಾಗಿರುವುದು ಕುತೂಹಲ ಮೂಡಿಸಿದೆ.ನಿನ್ನೆ ರಾತ್ರಿಯೇ ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರು ಹಾಲಿ ಸಂಸದ ಹಾಗೂ ಬಿಜೆಪಿ ಟಿಕೆಟ್ ವಂಚಿತಗೊಂಡ ಕಾರಣ ಹೈಕಮಾಂಡ್ನೊಂದಿಗೆ ಮುನಿಸಿಕೊಂಡಿದ್ದ ಸಂಗಣ್ಣ ಕರಡಿ ಅವರನ್ನು ಭೇಟಿ ಮಾಡಿದ ನಂತರ ರಾಜಕೀಯ ಲೆಕ್ಕಾಚಾರವೇ ಉಲ್ಟಾಪಲ್ಟ ಆಗಿದ್ದು, ಬೆಳಿಗ್ಗೆ ರಾಜಶೇಖರ ಹಿಟ್ನಾಳ್ ಅವರು ಸಂಗಣ್ಣ ಕರಡಿ ಅವರ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದಿರುವುದರಿಂದ, ಸಂಗಣ್ಣ ಕರಡಿ ಅವರು ಕಾಂಗ್ರೆಸ್ ಸೇರುವುದು ಖಚಿತ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ನತ್ತ ಸಂಗಣ್ಣ ಕರಡಿ
ಹೈಕಮಾಂಡ್ನ ಕಟು ನಿರ್ಧಾರಕ್ಕೆ ಅಸಮಾಧಾನಗೊಂಡಿದ್ದ ಸಂಗಣ್ಣ ಕರಡಿ ಅವರು ಬಿಜೆಪಿಯಿಂದ ಅಂತರ ಕಾಯ್ದುಕೊಂಡು ಬಂದಿದ್ದರೆAದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಒಳಗೊಳಗೆ ಕರಡಿ ಅವರನ್ನು ಅವರ ಆಪ್ತ ಬಳಗದ ಮೂಲಕ ಸಂಪರ್ಕಿಸಲಾಗಿತ್ತು ಎಂದು ತಿಳಿದುಬಂದಿದೆ. ಜನತಾ ಪರಿವಾರದ ಹಿನ್ನೆಲೆಯನ್ನು ಹೊಂದಿರುವ ಸಂಗಣ್ಣ ಕರಡಿ ಅವರು ಜೆಡಿಎಸ್ನಲ್ಲಿದ್ದು ತದನಂತರ ಬಿಜೆಪಿಯತ್ತ ವಾಲಿದ್ದರು. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಈ ಹಿಂದೆ ಜೆಡಿಎಸ್ನಲ್ಲಿದ್ದಾಗಲೇ ಉತ್ತಮ ಬಾಂಧವ್ಯದ ಹೊಂದಿದ್ದರು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಸಂಗಣ್ಣ ಕರಡಿ ಅವರೊಂದಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಮಾತುಕತೆಯಾಡಿದ್ದಾರೆಂದು ಹೇಳಲಾಗುತ್ತಿದ್ದು, ಸಂಗಣ್ಣ ಕರಡಿ ಅವರು ಕಾಂಗ್ರೆಸ್ಗೆ ಹೋಗುವುದು ಖಚಿತ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ದಿಡೀರ್ ಬೆಳವಣಿಗೆ, ಬಿಜೆಪಿಯಲ್ಲಿ ಸಂಚಲನ
ಮುನಿಸು ತಣಿಸಲು ಹರಸಾಹಸಪಟ್ಟಿದ್ದ ಬಿಜೆಪಿ, ಈಗ ಸಂಗಣ್ಣ ಕರಡಿ ಅವರು ಕಾಂಗ್ರೆಸ್ನತ್ತ ಮುಖ ಮಾಡಿರುವುದರಿಂದ ಪಕ್ಷದಲ್ಲಿ ಸಂಚಲನ ಹಾಗೂ ತಳಮಳ ಸೃಷ್ಟಿಯಾಗಿದೆ ಎಂದು ತಿಳಿದುಬಂದಿದೆ. ಎರಡು ಬಾರಿ ಸಂಸದರಾಗಿ ಅಪಾರ ಬೆಂಬಲಿಗರು, ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಹೊಂದಿರುವ ಸಂಗಣ್ಣ ಕರಡಿ ಅವರ ಪಕ್ಷಾಂತರದಿಂದ ದೊಡ್ಡ ಪೆಟ್ಟಾಗಲಿದೆ ಎಂದು ಸಾರ್ವಜನಿಕ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.