ಕಿವಿ ಕಡಿಯವವರಿಗೆ ಕಿವಿ ಕೊಡಬೇಡಿ: ಹಂಪನಗೌಡ ಬಾದರ್ಲಿ ಮಾರ್ಮಿಕ ಹೇಳಿಕೆ

Spread the love

(ಪೊಲಿಟಿಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಏಪ್ರಿಲ್ 13

“ಕೆಲ ದಿನಗಳಿಂದ ವಿಶೇಷವಾಗಿ ಕೆಲ ಮುಖಂಡರು ನನ್ನ ಬಗ್ಗೆ ಮಾತನಾಡುತ್ತಿದ್ದು, ಈಗಾಗಲೇ ಸಿಂಧನೂರಲ್ಲಿ ಶುರು ಮಾಡಿದ್ದಾರೆ. ಹಾಗಾಗಿ ಅಂತಹ ವದಂತಿ, ಸುಳ್ಳು ಪ್ರಚಾರವನ್ನು ಯಾರೂ ಕಿವಿಗೆ ಹಾಕಿಕೊಳ್ಳಬಾರದು. ಸುಳ್ಳು ಮಾತು, ವದಂತಿಗಳ ಮೂಲಕ ‘ಕಿವಿ ಕಡಿಯುವವರಿಗೆ ಕಿವಿ ಕೊಡಬೇಡಿ’ ಎಂದು ಶಾಸಕ ಹಂಪನಗೌಡ ಬಾದರ್ಲಿ ಮಾರ್ಮಿಕವಾಗಿ ಹೇಳಿದರು.
ತಾಲೂಕಿನ ಸಾಲಗುಂದಾ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಕ್ಷದ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರ ಪ್ರಚಾರ ಸಭೆಯಲ್ಲಿ ಪರೋಕ್ಷವಾಗಿಯೇ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕುರಿತು ಕಥೆ ರೂಪದ ದೃಷ್ಟಾಂತವನ್ನು ಹೇಳುವ ಮೂಲಕ ಪರೋಕ್ಷವಾಗಿ ಕೆಲವರಿಗೆ ಮಾತಿನಲ್ಲೇ ತಿವಿದರು. “ನಾನು ಎಂದೂ ಜನ್ಮದಲ್ಲಿ ಮೋಸ ಮಾಡಿಲ್ಲ. ಮೋಸ ಮಾಡುವುದು ಇಲ್ಲ. ಬ್ಯಾರೇ ಯಾರೇ ಬಂದು ಏನೇ ಹೇಳಿದರೂ ಕಿವಿಗೊಡಬೇಡಿ, ಪ್ರತಿ ಚುನಾವಣೆಯಲ್ಲಿ ಸಾಲಗುಂದಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರಿಗೆ ಮತ ಹಾಕಿ ಅವರನ್ನು ಪ್ರಚಂಡ ಮತಗಳಿಂದ ಗೆಲ್ಲಿಸಿ” ಎಂದು ಮತದಾರರಲ್ಲಿ ಮನವಿ ಮಾಡಿದರು.
ಇತ್ತೀಚೆಗೆ ಗಂಗಾವತಿ ಕ್ಷೇತ್ರದ ಎಮ್ಮೆಲ್ಲೆ ಜನಾರ್ದನ ರೆಡ್ಡಿ ಸಂತೆಕೆಲ್ಲೂರಿನಲ್ಲಿ ನಡೆದ ಬಿಜೆಪಿ ಪಕ್ಷದ ಸಭೆಯೊಂದರಲ್ಲಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮತ್ತು ತಮ್ಮ ಹೆಸರನ್ನು ಪ್ರಸ್ತಾಪಿಸಿ ನೀಡಿದ ಹೇಳಿಕೆಯೊಂದಕ್ಕೆ ಪರೋಕ್ಷವಾಗಿ ಹಂಪನಗೌಡ ಬಾದರ್ಲಿ ಅವರು ಮಾತಿನ ಮೂಲಕ ಟಾಂಟ್ ನೀಡಿದ್ದಾರೆಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.


Spread the love

Leave a Reply

Your email address will not be published. Required fields are marked *