ನಮ್ಮ ಸಿಂಧನೂರು, ಏಪ್ರಿಲ್ 17
ನಗರದ ಗಡಿಯಾರ ಚೌಕ್ ಬಳಿ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ವತಿಯಿಂದ “ಕೋಮುವಾದಿ ಬಿಜೆಪಿ ಸೋಲಿಸಿ, ಸಂವಿಧಾನ, ಸಾಮರಸ್ಯ, ಸಾಮಾಜಿಕ ನ್ಯಾಯವನ್ನು ರಕ್ಷಿಸಿ” ಆಂದೋಲನ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಸಂಚಾಲಕ ಡಿ.ಎಚ್.ಪೂಜಾರ್, ಜನವಿರೋಧಿ, ಜನದ್ರೋಹಿ ಹಾಗೂ ಸಂವಿಧಾನ ವಿರೋಧಿ ಬಿಜೆಪಿ ಪಕ್ಷದ ಆಡಳಿತ ವೈಫಲ್ಯದ ವಿರುದ್ಧ ತಾಲೂಕಿನಾದ್ಯಂತ ಇಂದಿನಿಂದ ಚುನಾವಣಾ ಜನಜಾಗೃತಿ ಆಂದೋಲನ ನಡೆಯಲಿದೆ. ಜನಸಾಮಾನ್ಯರಲ್ಲಿ ಭಾವನಾತ್ಮಕ ವಿಚಾರಗಳನ್ನು ಕೆರಳಿಸಿ ಪರಸ್ಪರ ಒಡೆದಾಳುವ ಮೂಲಕ, ದೇಶದ ನೆಲ, ಜಲ, ಸಂಪತ್ತನ್ನು ಕಾರ್ಪೊರೇಟ್ ಕಂಪನಿಗಳಿಗೆ ಲೂಟಿ ಹೊಡೆಯಲು ಮುಕ್ತ ಅವಕಾಶ ನೀಡಿರುವ ಕಾರ್ಪೊರೇಟ್ ಕೋಮುವಾದಿ ಬಿಜೆಪಿ ಪಕ್ಷವನ್ನು ಸೋಲಿಸಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಬೇಕು ಎಂಬುದು ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯ ಕರೆಯಾಗಿದೆ ಎಂದು ಹೇಳಿದರು.

ಶ್ರೀಮಂತರಿಗೆ ಅಚ್ಛೇದಿನ್, ಬಡವರಿಗೆ ದುರ್ದಿನ !
ಮೋದಿ ಮತ್ತು ಬಿಜೆಪಿ ಸರ್ಕಾರ ಬಡವರ ಬದುಕನ್ನು ಕಿತ್ತಿ ತಿನ್ನಲು ಮತ್ತೆ ಹೊಂಚು ಹಾಕಿದೆ. ಹತ್ತು ವರ್ಷಗಳ ಹಿಂದೆ ಭರವಸೆಗಳ ಗೋಪುರಗಳನ್ನೇ ತೋರಿಸಿ ಕೇಂದ್ರದಲ್ಲ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜನರಿಗೆ ಕೊಟ್ಟ ಭರವಸೆಗಳಂತೆ ನಡೆದುಕೊಂಡಿದೆಯೇ ? ಅಚ್ಛೇದಿನಗಳು ಯಾರಿಗೆ ಬಂದವು ಎಂದು ಪ್ರಶ್ನಿಸಿದರು.
ಅದಾನಿ, ಅಂಬಾನಿ ಕಾ ವಿಕಾಸ್, ಬಡವರ ವಿನಾಶ್ !
2022ಕ್ಕೆ ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಮೋದಿಯವರು ಭರವಸೆ ನೀಡಿದ್ದರು. ಆದರೆ ದೆಹಲಿ ಹೋರಾಟದ ಮೂಲಕ ಬೆಂಬಲ ಬೆಲೆ ಶಾಸನಬದ್ಧಗೊಳಿಸಲು ಕೇಳಿದ ರೈತರ ದಾರಿಗೆ ಮುಳ್ಳು ಬೇಲಿ ಹಾಕಿ, ಅವರ ಮೇಲೆ ಬಿಜೆಪಿ ಇನ್ನಿಲ್ಲದ ದೌರ್ಜನ್ಯ ನಡೆಸಿದ ಪರಿಣಾಮ 770ರೈತರ ಮೃತಪಟ್ಟರು. ಕಪ್ಪು ಹಣ ವಾಪಸ್ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇನೆಂದು ಹೇಳಿ, ಇಂದು ಬ್ಯಾಂಕ್ ಮಿನಿಮಮ್ ಬ್ಯಾಲೆನ್ಸ್ ಹೆಸರಿನಲ್ಲಿ ಬಡವರ ಹಣ ಲೂಟಿ ಹೊಡೆಯಲಾಗುತ್ತಿದೆ. 2022ಕ್ಕೆ ಎಲ್ಲರಿಗೂ ಪಕ್ಕಾ ವಾಸದ ಮನೆ ಒದಗಿಸುವುದಾಗಿ ಮೋದಿಯವರು ಈ ಹಿಂದೆ ಜಂಬ ಕೊಚ್ಚಿಕೊಂಡಿದ್ದರು, ಆದರೆ ಇಂದಿಗೂ ದೇಶದಲ್ಲಿ 10ಕೋಟಿಗೂ ಹೆಚ್ಚು ಜನರಿಗೇ ಮನೆಯೇ ಇಲ್ಲ, ಮಾತು ಮಾತಿಗೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳುವ ಪ್ರಧಾನಿಯವರು ಅದಾನಿ, ಅಂಬಾನಿ ಕಾ ವಿಕಾಸ ಮಾಡಿ, ಬಡವರನ್ನು ವಿನಾಶದ ಅಂಚಿಗೆ ತಂದಿದ್ದಾರೆ. ನೋಟ್ ಬ್ಯಾನ್, ಅವೈಜ್ಞಾನಿಕ ಜಿಎಸ್ಟಿ ಜಾರಿಗೆ ತಂದು ಶ್ರೀಸಾಮಾನ್ಯನ ತಲೆಯ ಮೇಲೆ ಬಿಜೆಪಿ ಕಲ್ಲು ಚಪ್ಪಡಿ ಎಳೆದಿದೆ. ಕಾರ್ಪೊರೇಟ್ ಕಂಪನಿಗಳ ಮೇಲಿನ ತೆರಿಗೆ ಶೇ.30ರಿಂದ ಶೇ. 22ಕ್ಕೆ ಇಳಿಕೆ ಮಾಡಲಾಗಿದೆ. ಅಲ್ಲದೇ ಕಂಪನಿಗಳ ಮಾಲೀಕರ 14.50 ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಗಿದೆ. ಭ್ರಷ್ಟಾಚಾರ ಮುಕ್ತ ಮಾಡುವುದಾಗಿ ಆಡಳಿತಕ್ಕೆ ಬಂದ ಬಿಜೆಪಿ ಇಡಿ, ಐಟಿ, ಸಿಬಿಐಗಳನ್ನು ಕಂಪನಿಗಳ ಮೇಲೆ ಛೂಬಿಟ್ಟು ಚುನಾವಣಾ ಬಾಂಡ್ ಮೂಲಕ 8532 ಕೋಟಿ ಹಫ್ತಾ ವಸೂಲಿ ಮಾಡಿದ್ದು, ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಡಿ.ಎಚ್.ಪೂಜಾರ್ ಆಕ್ರೋಶ ವ್ಯಕ್ತಪಡಿಸಿದರು.

ಏಪ್ರಿಲ್ 22ರಂದು ಸಮಾವೇಶ:
ಬಿಜೆಪಿ ಸರ್ಕಾರದ 10 ವರ್ಷಗಳ ವೈಫಲ್ಯವನ್ನು ಖಂಡಿಸಿ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯಿಂದ ಮೇ 4ರವರೆಗೆ ನಗರ ಸೇರಿದಂತೆ ತಾಲೂಕಿನಾದ್ಯಂತ ಚುನಾವಣಾ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 22ರಂದು ನಗರದ ಕೋಟೆ ಕಲ್ಯಾಣ ಮಂಟಪದಲ್ಲಿ ವೇದಿಕೆಯ ಸಮಾವೇಶ ಆಯೋಜಿಸಲಾಗಿದೆ. ಆ ಸಮಾವೇಶಕ್ಕೆ ನಾಡಿನ ಚಿಂತಕರಾದ ಶಿವಸುಂದರ್ ಅವರು ಆಗಮಿಸಲಿದ್ದಾರೆ. ಬೆಳಿಗ್ಗೆ ಪಿಡಬ್ಲö್ಯಡಿ ಕ್ಯಾಂಪ್ನ ಅಂಬೇಡ್ಕರ್ ಸರ್ಕಲ್ನಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಯಲಿದೆ ಎಂದು ಡಿ.ಎಚ್.ಪೂಜಾರ್ ತಿಳಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಸಂಚಾಲಕರಾದ ಡಿ.ಎಚ್.ಕಂಬಳಿ, ದೇವೇಂದ್ರಗೌಡ, ಚಂದ್ರಶೇಖರ ಗೊರಬಾಳ, ಬಿ.ಎನ್.ಯರದಿಹಾಳ, ನಾಗರಾಜ ಪೂಜಾರ್, ಹುಸೇನ್ಸಾಬ್, ವೆಂಕನಗೌಡ ಗದ್ರಟಗಿ, ಗೋಪಾಲಕೃಷ್ಣ, ಮುದ್ದನಗೌಡ ಮುದ್ದಾಪುರ, ಬಸವರಾಜ ಕೊಂಡೆ, ಅಮೀನ್ಸಾಬ್, ಜಗದೀಶ್, ಬಸವರಾಜ ಬಾದರ್ಲಿ, ಸಮ್ಮದ್ ಚೌದ್ರಿ, ರಮೇಶ ಪಾಟೀಲ್ ಬರ್ಗಿ ಸೇರಿದಂತೆ ಇನ್ನಿತರರು ಇದ್ದರು.
