ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 17
ತಮ್ಮ ಮಕ್ಕಳು ಉತ್ತಮ ಅಭ್ಯಾಸ ಮಾಡಿ, ಜೀವನದಲ್ಲಿ ಉನ್ನತ ಸಾಧನೆ ಮಾಡುತ್ತಾರೆ. ಒಳ್ಳೆಯ ಬದುಕು ಕಟ್ಟಿಕೊಳ್ಳುತ್ತಾರೆ ಎಂದು ತಮ್ಮೆಲ್ಲಾ ಕಷ್ಟಗಳನ್ನು ಮರೆಮಾಚಿ ಓದಿಸುತ್ತಾರೆ. ಈ ನಂಬಿಕೆಯನ್ನು ವಿದ್ಯಾರ್ಥಿಗಳು ಹುಸಿಗೊಳಿಸಬಾರದು ಎಂದು ಡಿವೈಎಸ್ಪಿ ಬಿ.ಎಸ್.ತಳವಾರ ಕಿವಿಮಾತು ಹೇಳಿದರು.
ನಗರದ ಸತ್ಯಾಗಾರ್ಡನ್ನಲ್ಲಿ ವಿ.ಸಿ.ಬಿ. ಪದವಿ ಪೂರ್ವ ಕಾಲೇಜ್, ನ್ಯಾಷನಲ್ ಪದವಿ ಮಹಾವಿದ್ಯಾಲಯದಿಂದ ಗುರುವಾರ ಹಮ್ಮಿಕೊಂಡಿದ್ದ ಪ್ರಥಮ ಪಿಯು ಮತ್ತು ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಸಮಯ ವ್ಯರ್ಥವಾಗಿ ಕಳೆಯದೇ ಸಾಧನೆಯನ್ನು ಮಾಡೇ ಮಾಡ್ತೀನಿ ಎನ್ನುವ ಛಲ ತೊಡಬೇಕು. ಒಳ್ಳೆಯ ಗೆಳೆಯರೊಂದಿಗೆ ಒಡನಾಟವಿಟ್ಟುಕೊಂಡು ಅಭ್ಯಾಸದ ಕುರಿತು ಚರ್ಚಿಸಬೇಕು. ವಯಸ್ಸಿಗೆ ಅನುಗುಣವಾಗಿ ಹತ್ತಾರು ಆಲೋಚನೆಗಳು ಬರುತ್ತವೆ. ಆದರೆ ಮನಸ್ಸನ್ನು ನಿಯಂತ್ರಿಸಬೇಕು. ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದೇ, ಸದಾ ಓದಿನ ಕಡೆಗೆ ಆಸಕ್ತಿ ತಳೆಯಬೇಕು. ತಮ್ಮ ಈ ಸಾಧನೆಗೆ ಅಭ್ಯಾಸದ ಸಮಯದಲ್ಲಿ ದೊರೆತ ಉತ್ತಮ ಗೆಳೆಯರ ಸಹವಾಸವೇ ಕಾರಣ” ಎಂದು ಅವರು ಹೇಳಿದರು.

ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ: ಪಿಎಸ್ಐ ಎರಿಯಪ್ಪ ಅಂಗಡಿ
ಬಳಗಾನೂರು ಠಾಣೆಯ ಪಿಎಸ್ಐ ಎರಿಯಪ್ಪ ಅಂಗಡಿ ಅವರು ಮಾತನಾಡಿ, “ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪಡೆದಿರುವ ಪಿಎಚ್.ಡಿ ಪದವಿಗಳು, ಅವರ ಸಂಶೋಧನೆಗಳು ಮತ್ತು ಪುಸ್ತಕಗಳು ಅವರನ್ನು ಜ್ಞಾನ ಪರ್ವತವನ್ನಾಗಿ ಮಾಡಿವೆ. ಅಂಬೇಡ್ಕರ್ ಅವರ ಜನ್ಮದಿನವನ್ನು ಪ್ರಪಂಚದಾದ್ಯಂತ ಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ” ಎಂದು ಹೇಳಿದರು.
ಪಾಟೀಲ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಸಿ.ಪಾಟೀಲ್, ಅಲಬನೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ.ಎಸ್.ಶಿವರಾಜ ಮಾತನಾಡಿದರು. ಸಾಹಿತಿ ರಮೇಶ ಬಾಬು ಯಾಳಗಿ ಉಪನ್ಯಾಸ ನೀಡಿದರು. ಪ್ರಾಚಾರ್ಯ ರಾಮಲಿಂಗಯ್ಯ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ವಿಸಿಬಿ ಸಂಸ್ಥೆಯ ಅಧ್ಯಕ್ಷ ಅಶೋಕ ಬೆನ್ನೂರು, ಉಪಾಧ್ಯಕ್ಷ ಚಂದ್ರಶೇಖರ ಬೆನ್ನೂರು, ಎಚ್, ನಾಗರಾಜ ಪತ್ತಾರ ಪ್ರಾಚಾರ್ಯ ಇನ್ನಿತರರು ಇದ್ದರು.

ಸಂವಾದ
ಕಾಲೇಜಿನ ವಿದ್ಯಾರ್ಥಿಗಳು ಡಿವೈಎಸ್ಪಿ ಬಿ.ಎಸ್.ತಳವಾರ ಹಾಗೂ ಬಳಗಾನೂರು ಪಿಎಸ್ಐ ಯರಿಯಪ್ಪ ಅವರೊಂದಿಗೆ ಕೆಲವೊತ್ತು ಸಂವಾದ ನಡೆಸಿದರು. ವಿದ್ಯಾರ್ಥಿಗಳಾದ ಪ್ರಥಮ ಪಿಯುನ ಸಿಂಧು, ಪದವಿ ವಿದ್ಯಾರ್ಥಿ ಸಂಗೀತಾ ಸೇರಿದಂತೆ ಇನ್ನಿತರೆ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪೊಲೀಸ್ ಅಧಿಕಾರಿಗಳು ಉತ್ತರಿಸಿದರು. ಕೊನೆಯಲ್ಲಿ ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಸಂಚಾರ ನಿಯಮ ಪಾಲನೆ, ಹೆಲ್ಮೆಟ್ ಕಡ್ಡಾಯ ಕುರಿತಂತೆ ಜಾಗೃತಿ ಮೂಡಿಸಿದರು.