ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 11
ಸಿಂಧನೂರಿನಿಂದ ಬೆಳಿಗ್ಗೆ 5.15ಕ್ಕೆ ಹುಬ್ಬಳ್ಳಿಗೆ ಹೊರಡುವ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಡೆಮೋ ರೈಲಿನಲ್ಲಿ ಶೌಚಾಲಯ, ವಾಷ್ ರೂಮ್ಗಳ ಕೊರತೆಯಿಂದಾಗಿ ಥಂಡಿ ಚಳಿಯಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರು ಮೂತ್ರ/ಮಲ ವಿಸರ್ಜನೆಗೆ ಪರದಾಡುವಂತಾಗಿದೆ. ದೊಡ್ಡದಾದ ಡೆಮೋ ರೈಲಿನಲ್ಲಿ ಬೋಗಿಗಳಿಗೆ ತಕ್ಕಂತೆ ಶೌಚಾಲಯ, ವಾಷ್ ರೂಮ್ ಇಲ್ಲದಿರುವುದರಿಂದ ಕಿರಿ ಕಿರಿ ಅನುಭವಿಸುತ್ತಿದ್ದಾರೆ.
ಮೂತ್ರ ವಿಸರ್ಜನೆಗೆ ಕ್ಯೂ !
ಬೆಳಿಗ್ಗೆ ವಿಪರೀತ ಚಳಿ ಇರುವುದರಿಂದ ಪದೇ ಪದೆ ಮೂತ್ರ ವಿಸರ್ಜನೆಗೆ ಹೋಗುವುದು ಪ್ರಯಾಣಿಕರಿಗೆ ಅನಿವಾರ್ಯವಾಗಿದೆ. ಆದರೆ ರೈಲಿನಲ್ಲಿ 300ಕ್ಕೂ ಅಧಿಕ ಪ್ರಯಾಣಿಕರಿಗೆ ಭೋಗಿಗಳಲ್ಲಿ ಒಂದೇ ಒಂದು ಶೌಚಾಲಯ ವ್ಯವಸ್ಥೆ ಇದ್ದು, ಮೂತ್ರ ವಿಸರ್ಜನೆಗೆ ಕ್ಯೂ ನಿಲ್ಲಬೇಕಿದೆ. ಮೂತ್ರ ವಿಸರ್ಜನೆಗೆ ಹೋದವರು ಸ್ವಲ್ಪ ಹೊತ್ತು ಜಾಸ್ತಿಯಾದರೆ ಕ್ಯೂ ನಿಂತವರು ಬಾಗಿಲು ಬಡಿಯುತ್ತಾರೆ. ಇದರಿಂದ ಮುಜುಗರ ಅನುಭವಿಸುವಂತಾಗಿದೆ ಎಂದು ಹೆಸರೇಳಲಿಚ್ಚಿಸದ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.
ಹುಬ್ಬಳ್ಳಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಹೋಗುವವರಿಗೆ ಸಂಕಷ್ಟ !!
ಬಹುತೇಕ ಸಿಂಧನೂರು ಸೇರಿದಂತೆ ಗ್ರಾಮಾಂತರ ಪ್ರದೇಶದಿಂದ ಹುಬ್ಬಳ್ಳಿಗೆ ಚಿಕಿತ್ಸೆಗಾಗಿ ಹೋಗುವವರು ಸಂಖ್ಯೆ ಹೆಚ್ಚು. ಆದರೆ ಶೌಚಾಲಯಗಳ ಕೊರತೆಯಿಂದ ವಯೋವೃದ್ಧರು, ಮಕ್ಕಳು, ಮಹಿಳೆಯರು ಹಾಗೂ ವಿಕಲಚೇತನರು ಮೂತ್ರ ವಿಸರ್ಜನೆ ಹೋಗಲು ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ ಎರಡಕ್ಕೂ ಹೆಚ್ಚು ತಿಂಗಳಿಂದ ಇದೇ ರೀತಿ ಸಮಸ್ಯೆ ಮುಂದುವರಿದಿದೆ ಎಂದು ವೃದ್ಧರೊಬ್ಬರು ತಿಳಿಸಿದರು.
2 ತಿಂಗಳಿAದ ಪ್ರಯಾಣಿಕರಿಗೆ ತೊಂದರೆ
ಕಳೆದ 2 ತಿಂಗಳಿಗೂ ಹೆಚ್ಚು ದಿನಗಳಿಂದ ಸಿಂಧನೂರಿನಿಂದ ಡೆಮೋ ರೈಲು ಓಡಾಟ ನಡೆಸಿದ್ದು, ಈ ರೈಲಿನಲ್ಲಿ ಅಗತ್ಯ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಬೇರೆ ದಾರಿಯಿಲ್ಲದೇ ಅನಿವಾರ್ಯವಾಗಿ ಕಿರಿ ಕಿರಿ ಅನುಭವಿಸುತ್ತ ನೂರಾರು ಕಿ.ಮೀ ಪ್ರಯಾಣಿಸುವಂತಾಗಿದೆ ಎಂದು ಪ್ರಯಾಣಿಕರೊಬ್ಬರು ಹೇಳುತ್ತಾರೆ.
ಕೇವಲ ಮೂರ್ನಾಲ್ಕು ಶೌಚಾಲಯ ?
ಈ ಡೆಮೋ ರೈಲಿನಲ್ಲಿ 300ಕ್ಕೂ ಹೆಚ್ಚು ಜನರಿಗೆ ಒಂದೇ ಒಂದು ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಇಡೀ ರೈಲಿನಲ್ಲಿ ದಿನವೂ ಸಾವಿರಾರು ಜನರು ಪ್ರಯಾಣಿಸುತ್ತಾರೆ, ಅಷ್ಟು ಪ್ರಯಾಣಿಕರಿಗೆ ಕೇವಲ ಮೂರ್ನಾಲ್ಕು ಶೌಚಾಲಯ ವ್ಯವಸ್ಥೆ ಸಾಲುತ್ತದೆಯೇ ? ಅನುಕೂಲಕರವಲ್ಲದ ರೈಲನ್ನು ಈ ಮಾರ್ಗದಲ್ಲಿ ಓಡಿಸಲಾಗುತ್ತಿದ್ದು, ಇದರಿಂದ ಪ್ರಯಾಣಿಕರು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.
ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಇಲ್ಲ
ಈ ರೈಲಿನಲ್ಲಿ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಇಲ್ಲ. ರೈಲಿನ ಬೋಗಿಗಳಲ್ಲಿ ಮೊಬೈಲ್ ಚಾರ್ಜಿಂಗ್ ಮಾಡೋಣ ಎಂದು ಅವಸರದಿಂದ ಬಂದ ಪ್ರಯಾಣಿಕರು ಬೋಗಿಗಳಲ್ಲಿ ಚಾರ್ಜಿಂಗ್ ವ್ಯವಸ್ಥೆ ಇಲ್ಲದಿರುವುದನ್ನು ನೋಡಿ ಪರೇಶಾನ್ ಆಗುತ್ತಿದ್ದಾರೆ. ಇನ್ನೂ ಸೀಟ್ ವ್ಯವಸ್ಥೆ ಕಂಫರ್ಟ್ ಇಲ್ಲದೇ ಇರುವುದರಿಂದ ಕೆಲವರು ಅತ್ತಿಂದಿದ್ದತ್ತ, ಇತ್ತಿದಂತ್ತ ಹೊರಳಾಡುವುದು ಸಾಮಾನ್ಯವಾಗಿದೆ. ಸಿಟಿಯಲ್ಲಿ ಓಡಿಸಬೇಕಾದ ರೈಲನ್ನು ನೂರಾರು ಕೀ.ಮೀ ವ್ಯಾಪ್ತಿಯಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಿರುವುದರಿಂದ ಈ ಸಮಸ್ಯೆ ಅನುಭವಿಸುವಂತಾಗಿದೆ ಎಂದು ಪ್ರಯಾಣಿಕರು ದೂರುತ್ತಾರೆ.
ಮೂಲ ಸೌಕರ್ಯವುಳ್ಳ ರೈಲು ಓಡಿಸಲು ಒತ್ತಾಯ
“ಇತ್ತೀಚೆಗೆ ಪರೀಕ್ಷೆ ಬರೆಯಲು ಸಿಂಧನೂರಿನಿಂದ ಹುಬ್ಬಳ್ಳಿಗೆ ಹೋದ ಸಂದರ್ಭದಲ್ಲಿ ಕಿರಿ ಕಿರಿ ಅನುಭವಿಸುವಂತಾಯಿತು. ಇನ್ನೂ ಮಹಿಳೆಯರು, ಮಕ್ಕಳು, ವಯೋವೃದ್ಧರು ಹಾಗೂ ವಿಕಲಚೇತನರು ಈ ರೈಲಿನಲ್ಲಿ ಶೌಚಾಲಯಗಳ ಕೊರತೆಯಿಂದ ದಿನವೂ ತೊಂದರೆ ಅನುಭವಿಸುತ್ತಿದ್ದಾರೆ. ಆದಷ್ಟು ಬೇಗನೇ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು, ಅಗತ್ಯ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ರೈಲನ್ನು ಈ ಮಾರ್ಗದಲ್ಲಿ ಓಡಿಸಬೇಕು” ಎಂದು ಸಾಮಾಜಿಕ ಕಾರ್ಯಕರ್ತ ನೂರ್ ಪಟೇಲ್ ಅವರು ಒತ್ತಾಯಿಸಿದ್ದಾರೆ.

